ADVERTISEMENT

ಪಠ್ಯದಲ್ಲಿ ಭಗವದ್ಗೀತೆ ಬೇಡ ಎಂದರೆ ಮತ್ತೇನು ಕಲಿಸ್ತೀರಿ?: ನ್ಯಾ. ವಿ. ಶ್ರೀಶಾನಂದ

ನರಸಿಂಹ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 23:48 IST
Last Updated 21 ಡಿಸೆಂಬರ್ 2025, 23:48 IST
   

ಬೆಂಗಳೂರು: ‘ಪಠ್ಯದಿಂದ ಗೋವಿನಹಾಡು ತೆಗೆದಾಗಿದೆ. ಭಗವದ್ಗೀತೆ ಸೇರಿಸುವುದು ಬೇಡ ಎಂದು ತಜ್ಞರೇ ತಿಳಿಸಿದ್ದಾರೆ. ಹಾಗಾದರೆ ಮಕ್ಕಳಿಗೆ ಏನನ್ನು ಕಲಿಸುತ್ತೀರಿ’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ವಿ. ಶ್ರೀಶಾನಂದ ಪ್ರಶ್ನಿಸಿದರು.

ಕೂಟ ಮಹಾಜಗತ್ತು ಭಾನುವಾರ ಹಮ್ಮಿಕೊಂಡಿದ್ದ ‘ನರಸಿಂಹ ಪ್ರಶಸ್ತಿ ಪ್ರದಾನ’, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಅಂಕ ಗಳಿಸುವಷ್ಟೇ ಮುಖ್ಯ ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವುದು ಆಗಿದೆ. ನೂರಕ್ಕೆ ನೂರು ಅಂಕ ಗಳಿಸಿ ಅವರು ಅಮೆರಿಕಕ್ಕೆ ಹಾರಿ ಹೋದರೆ, ಇಲ್ಲಿ ಹೆತ್ತವರು ಜಾರಿ ಬಿದ್ದಾಗ ನೆರವಿನ ಹಸ್ತ ಚಾಚಲು ಯಾರೂ ಇಲ್ಲದೇ ಇದ್ದರೆ ಎಷ್ಟು ದುಡ್ಡು ಇದ್ದು ಏನು ಪ್ರಯೋಜನ? ಅಂಕ ಕಡಿಮೆ ಇದ್ದರೂ ಪರವಾಗಿಲ್ಲ. ಹೆತ್ತವರನ್ನು ವೃದ್ಧಾಪ್ಯ ಕಾಲದಲ್ಲಿ ನೋಡಿಕೊಂಡು, ಉತ್ತಮ ದಾರಿಯಲ್ಲಿ ಸಂಪಾದನೆ ಮಾಡುವಂತಾಗಬೇಕು’ ಎಂದು ಹೇಳಿದರು.

ADVERTISEMENT

‘ದೈವ ಋಣ, ಋಷಿ ಋಣ, ಪಿತೃ ಋಣ, ರಾಷ್ಟ್ರ ಋಣವು ಎಲ್ಲ ಮನುಷ್ಯರ ಮೇಲಿರುತ್ತದೆ. ಈ ಋಣವನ್ನು ಜೀವಿತಾವಧಿಯಲ್ಲಿ ತೀರಿಸಬೇಕು. ಸೈನಿಕರಿಗೆ, ರೈತರಿಗೆ, ದೀನ ದಲಿತರಿಗೆ, ನಮ್ಮ ನೆರೆಹೊರೆಯವರಿಗೆ, ದೇಶಕ್ಕೆ ನಾವು ಮಿಡಿಯದಿರುವುದು ಕೋವಿಡ್‌ ಕಾಲದಲ್ಲಿ ನೋಡಿದ್ದೇವೆ. ಮಿಡಿಯುವ ಗುಣವನ್ನು ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ನಿವೃತ್ತ ಸೇನಾಧಿಕಾರಿಗಳಾದ ಕರ್ನಲ್‌ ಚಿನ್ಮಯಿ, ಕರ್ನಲ್‌ ಪುಷ್ಪಾ ಕಪ್ರಿ, ಹೋಟೆಲ್‌ ಉದ್ಯಮಿ ಜಿ. ಪ್ರಕಾಶ್‌ ಮಯ್ಯ, ವೈದ್ಯಕೀಯ ಕ್ಷೇತ್ರದ ಡಾ. ಎ.ಎಸ್‌. ಕೃಷ್ಣಮೂರ್ತಿ ಕಾರಂತ. ಸಮಾಜ ಸೇವಕ ಕೆ. ತಾರಾನಾಥ ಹೊಳ್ಳ, ಯಕ್ಷಗಾನ ಕಲಾವಿದ ಸುದರ್ಶನ ಉರಾಳ ಅವರಿಗೆ ನರಸಿಂಹ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕೂಟಮಹಾಜಗತ್ತು ಬೆಂಗಳೂರು ಅಂಗಸಂಸ್ಥೆ ಅಧ್ಯಕ್ಷ ಪಿ.ಎಂ. ಗಿರಿಧರ ಉಪಾಧ್ಯಾಯ, ಗುರುನರಸಿಂಹ ಬಿಲಿಯನ್‌ ಫೌಂಡೇಷನ್‌ ಅಧ್ಯಕ್ಷ ಇ. ಗೋಪಾಲಕೃಷ್ಣ ಹೇರ್ಳೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.