ADVERTISEMENT

ಭಗವದ್ಗೀತೆ ಪ್ರೇರಣಾ ಶಕ್ತಿ: ಗೀತಾ ದಾನ ಯಜ್ಞ ಮಹೋತ್ಸವದಲ್ಲಿ ರಾಜನಾಥ್ ಸಿಂಗ್‌

‘ಗೀತಾ ದಾನ ಯಜ್ಞ ಮಹೋತ್ಸವ’ದಲ್ಲಿ ರಾಜನಾಥ್ ಸಿಂಗ್

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 19:45 IST
Last Updated 3 ಡಿಸೆಂಬರ್ 2022, 19:45 IST
ನಗರದ ವಸಂತಪುರದ ಇಸ್ಕಾನ್‌ನಲ್ಲಿ ಶನಿವಾರ ಆಯೋಜಿಸಿದ್ದ 'ಗೀತಾ ದಾನ ಯಜ್ಞ ಮಹೋತ್ಸವ’ದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಗವದ್ಗೀತೆಯ ಪುಸ್ತಕಗಳನ್ನು ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್ ಅವರಿಗೆ ನೀಡಿದರು. 
ನಗರದ ವಸಂತಪುರದ ಇಸ್ಕಾನ್‌ನಲ್ಲಿ ಶನಿವಾರ ಆಯೋಜಿಸಿದ್ದ 'ಗೀತಾ ದಾನ ಯಜ್ಞ ಮಹೋತ್ಸವ’ದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಗವದ್ಗೀತೆಯ ಪುಸ್ತಕಗಳನ್ನು ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್ ಅವರಿಗೆ ನೀಡಿದರು.    

ಬೆಂಗಳೂರು: ಭಗವದ್ಗೀತೆಯ ನೀತಿಯನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

ವಸಂತಪುರದ ಇಸ್ಕಾನ್‌ನ ರಾಜಾಧಿರಾಜ ಗೋವಿಂದ ಮಂದಿರದಲ್ಲಿ ಗೀತಾ ಜಯಂತಿ ಪ್ರಯುಕ್ತ ಆಯೋಜಿಸಿದ್ದ 'ಗೀತಾ ದಾನ ಯಜ್ಞ ಮಹೋತ್ಸವ' ಉದ್ಘಾಟಿಸಿ ಅವರು ಮಾತನಾಡಿದರು.

ಸತ್ಯ, ಧರ್ಮ, ಅಹಿಂಸೆಯನ್ನು ಪ್ರತಿಪಾದಿಸುವ ಭಗವದ್ಗೀತೆ ಮಹಾಕವಿಗಳು, ಸಾಧಕರಿಗೂ ಪ್ರೇರಣಾ ಶಕ್ತಿ. ಜೀವನಕ್ಕೆ ಹತ್ತಿರವಾಗಿದೆ. ನಾವು ಹೇಗೆ ಶೋಕದಿಂದ ಮುಕ್ತವಾಗಬಹುದೆಂದು ತಿಳಿಸಿಕೊಡುತ್ತದೆ. ಮೃತ್ಯುವಿನ ಭಯ ಹೋಗಲಾಡಿಸುತ್ತದೆ. ಅಧ್ಯಾತ್ಮದ ಕಡೆ ಕರೆದುಕೊಂಡು ಹೋಗುತ್ತದೆ ಎಂದು ಬಣ್ಣಿಸಿದರು.

ADVERTISEMENT

ಪಠ್ಯ ಕಲಿಕೆಗೆ ಶಿಕ್ಷಕರ ಅವಶ್ಯಕತೆ ಇರುತ್ತದೆ. ಆದರೆ, ಶಾಂತ, ಕ್ರೌರ್ಯ, ಸಂತಸ, ದುಃಖ ಮತ್ತಿತರಭಾವನೆಗಳನ್ನು ಯಾರೂ ಕಲಿಸುವುದಿಲ್ಲ. ಅವು ನಮ್ಮಲ್ಲೇ ಪ್ರಕಟಗೊಳ್ಳುತ್ತವೆ. ಸಕಾರಾತ್ಮಕವಾಗಿ ಆಲೋಚನೆ ಮಾಡಿ ಒಳ್ಳೆಯ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಅದೇ ತೆರನಾದ ಜೀವನ ಶೈಲಿಯನ್ನು ಮುಂದಿನ ಯುವ ಪೀಳಿಗೆಗೂ ತಲುಪಿಸಬೇಕು ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೀತದಾನ ಯಜ್ಞದ ಅವಧಿಯಲ್ಲಿ ಒಂದು ಲಕ್ಷ ಭಗವದ್ಗೀತೆ ಪ್ರತಿಗಳನ್ನು ಜನರಿಗೆ ಹಂಚುವ ಕೆಲಸ ಶ್ಲಾಘನೀಯ ಎಂದರು.

ಮಕ್ಕಳು ಮತ್ತು ಯುವಜನರ ವಿವಿಧ ತಂಡಗಳು ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಿದರು. ವಿದ್ವಾಂಸ ವಿದ್ಯಾಭೂಷಣ ಅವರು ಭಗವದ್ಗೀತೆಯ ವಾಚನದ ಯೂಟ್ಯೂಬ್ ವೀಡಿಯೊ ಬಿಡುಗಡೆ ಮಾಡಿದರು.

ಇಸ್ಕಾನ್ ಉಪಾಧ್ಯಕ್ಷ ಚಂಚಲ ದಾಸ್‌, ಇಸ್ಕಾನ್ ಅಕ್ಷಯ ಪಾತ್ರೆ ಅಧ್ಯಕ್ಷ ಮಧುಪಂಡಿತ್ ದಾಸ್, ಕಂದಾಯ ಸಚಿವ ಆರ್. ಅಶೋಕ್, ಸಂಸದ ತೇಜಸ್ಚಿ ಸೂರ್ಯ, ಶಾಸಕ ಎಂ‌. ಕೃಷ್ಣಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.