ADVERTISEMENT

ಭೀಮಾ ಕೋರೆಗಾಂವ್‌: ಶೋಷಿತರ ಪರ ದನಿಯಾಗಿದ್ದ ಮಹರ್ ಸೈನಿಕರು

‘ಶೂದ್ರ ಸಮುದಾಯಗಳ ಪ್ರಗತಿಗೆ ಭೀಮಾ ಕೋರೆಗಾಂವ್‌ ಯುದ್ಧವೇ ಬುನಾದಿ’

​ಪ್ರಜಾವಾಣಿ ವಾರ್ತೆ
Published 1 ಜನವರಿ 2023, 16:27 IST
Last Updated 1 ಜನವರಿ 2023, 16:27 IST
ನಗರದಲ್ಲಿ ಭಾನುವಾರ ‘205ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಹಾಗೂ ಧ್ವಜವಂದನಾ ಕಾರ್ಯಕ್ರಮ’ದಲ್ಲಿ (ಎಡದಿಂದ) ಎಸ್.ಸಿ/ಎಸ್.ಟಿ ಸರ್ಕಾರಿ ನೌಕರರ ಸಮನ್ವಯ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಡಿ. ಶಿವಶಂಕರ್, ಬಹುಜನ ದ್ರಾವಿಡ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೀವನ್ ಕುಮಾರ್ ಮಲ್ಲ, ಸಂವಿಧಾನ ಸಂರಕ್ಷಣಾ ಮಹಾಒಕ್ಕೂಟದ ಮುಖಂಡ ಬಿ. ಗೋಪಾಲ್, ಧಮ್ಮ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಬಂತೆ ಬೋಧಿ ಪ್ರಜ್ಞಾನಂದ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. -ಪ್ರಜಾವಾಣಿ ಚಿತ್ರ
ನಗರದಲ್ಲಿ ಭಾನುವಾರ ‘205ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಹಾಗೂ ಧ್ವಜವಂದನಾ ಕಾರ್ಯಕ್ರಮ’ದಲ್ಲಿ (ಎಡದಿಂದ) ಎಸ್.ಸಿ/ಎಸ್.ಟಿ ಸರ್ಕಾರಿ ನೌಕರರ ಸಮನ್ವಯ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಡಿ. ಶಿವಶಂಕರ್, ಬಹುಜನ ದ್ರಾವಿಡ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೀವನ್ ಕುಮಾರ್ ಮಲ್ಲ, ಸಂವಿಧಾನ ಸಂರಕ್ಷಣಾ ಮಹಾಒಕ್ಕೂಟದ ಮುಖಂಡ ಬಿ. ಗೋಪಾಲ್, ಧಮ್ಮ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಬಂತೆ ಬೋಧಿ ಪ್ರಜ್ಞಾನಂದ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. -ಪ್ರಜಾವಾಣಿ ಚಿತ್ರ   

ಬೆಂಗಳೂರು: ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ–ಕರ್ನಾಟಕ ಮತ್ತು ಸಮತಾ ಸೈನಿಕ ದಳದಿಂದ 205ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ನಡೆಯಿತು.

‘ದೇಶದಲ್ಲಿ ಪ್ರಜಾಪ್ರಭುತ್ವದ ಸ್ಥಾಪನೆಗೆ ಮತ್ತು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಶೂದ್ರ ಸಮುದಾಯಗಳು ಪ್ರಗತಿ ಸಾಧಿಸಲು ಭೀಮಾ ಕೋರೆಗಾಂವ್‌ ಯುದ್ಧವೇ ಬುನಾದಿಯಾಗಿದೆ’ ಎಂದು ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ–ಕರ್ನಾಟಕದ ಮುಖಂಡ ಬಿ. ಗೋಪಾಲ್ ಹೇಳಿದರು.

‘ಭೀಮಾ ಕೋರೆಗಾಂವ್ ಯುದ್ಧ ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ಘಟನೆ. 1818 ಜನವರಿ 1ರಂದು ಮನುವಾದಿ ಪೇಶ್ವೆ ಬಾಜಿರಾಯನ 28 ಸಾವಿರ ಸೈನಿಕರನ್ನು ಕೇವಲ 500 ಮಹರ್ ಸೈನಿಕರು 12 ಗಂಟೆಯಲ್ಲಿ ಸೋಲಿಸಿ ಶೋಷಿತರ ಪರ ಧ್ವನಿ ಎತ್ತಿದ್ದರು. ಹುತಾತ್ಮರಾಗಿದ್ದ ಸೈನಿಕರ ನೆನಪಿಗಾಗಿ ಬ್ರಿಟಿಷರು ಕೋರೆಗಾಂವ್‌ನಲ್ಲಿ ಸ್ಮಾರಕ ನಿರ್ಮಿಸಿದ್ದರು. 1927ರಿಂದ ಪ್ರತಿವರ್ಷ ಅಂಬೇಡ್ಕರ್‌ ಜ.1ರಂದು ಅಲ್ಲಿಗೆ ಹೋಗಿ ನಮನ ಸಲ್ಲಿಸುತ್ತಿದ್ದರು’ ಎಂದು ಮಾಹಿತಿ ನೀಡಿದರು.

ADVERTISEMENT

‘ಭಾರತದ ಮೂಲ ನಿವಾಸಿ ಸಮುದಾಯಗಳಲ್ಲಿ ಹೊಸ ಭರವಸೆ ಮತ್ತು ಉತ್ಸಾಹ ತುಂಬಲು ಈ ವಿಜಯೋತ್ಸವವೇ ಸ್ಪೂರ್ತಿ. ಇದರ ಸಂಕೇತವಾಗಿ ಅಸ್ಪೃಶ್ಯರು ಸೇರಿ ದೇಶದ ಎಲ್ಲಾ ವರ್ಗದ ಜನ ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದಾರೆ. ನಾವು ಆಳುವ ಸಮಾಜವಾಗಿ ದೌರ್ಜನ್ಯ ದಬ್ಬಾಳಿಕೆಯನ್ನು ಪ್ರತಿಭಟಿಸಬೇಕಿದೆ’ ಎಂದರು.

ಭೀಮಾ ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ಪಥಸಂಚಲನ ನಡೆಸಿದರು. ನಂತರ ಧ್ವಜವಂದನೆ ಸೇರಿ ಪ್ರತಿಜ್ಞಾ ವಿಧಿ ಮತ್ತು ಭೀಮ ಸಂದೇಶ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.