ಬೆಂಗಳೂರು: ನಗರದ ದೊಮ್ಮಲೂರಿನಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ಭಾನುವಾರ ದಿನವಿಡೀ ಮಕ್ಕಳ ತುಂಟಾಟ, ವಿನೋದ, ಪೋಷಕರ ಕೂಟ. ಇವುಗಳ ಜತೆಗೆ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಗಹನ ಚಿಂತನೆಗಳ ಮಿಂಚುಗಳೂ ಕೋರೈಸಿದವು.
ಇವುಗಳಿಗೆ ಅವಕಾಶ ಕಲ್ಪಿಸಿದ್ದು ಸಂಸ್ಥೆ ಏರ್ಪಡಿಸಿದ್ದ ‘ಬಿಐಸಿ ಹಬ್ಬ’. ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರುದ್ಧ ದೇಶದೆಲ್ಲೆಡೆ ವ್ಯಾಪಕ ವಿರೋಧದ ಅಲೆ ಎದ್ದಿದ್ದರೆ, ಅದರ ಮೂಲ ಹುಡುಕುವ ಪ್ರಯತ್ನ ಇಲ್ಲಿ ನಡೆಯಿತು. ಜಾಗತಿಕ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವ ಚೀನಾದಿಂದ ಭಾರತಕ್ಕೆ ಎದುರಾಗಬಹುದಾದ ಸವಾಲುಗಳ ಕುರಿತು ಜಿಜ್ಞಾಸೆನಡೆಯಿತು.
ಬೆಂಗಳೂರು ನಗರ ಅಂದು ಹೇಗಿತ್ತು, ಇಂದು ಏನಾಗಿದೆ ಎಂಬುದನ್ನು ತುಲನಾತ್ಮಕವಾಗಿ ವಿಶ್ಲೇಷಿಸುವ ಪ್ರಯತ್ನವನ್ನು ರಂಗಕರ್ಮಿ ಪ್ರಕಾಶ್ ಬೆಳವಾಡಿ ಮಾಡಿದರು. ನಗರದ ಕಸ ವಿಲೇವಾರಿ ಸಮಸ್ಯೆ, ಭಾಷಾ ಗೊಂದಲಗಳು, ಕಾರ್ಮಿಕರ ಬವಣೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನಗಳೂ ನಡೆದವು. ಲೇಖಕ
ಸಯೀದ್ ಮಿರ್ಜಾ ಅವರೊಂದಿಗೆ ಚಿಂತಕ ಆಕಾರ್ ಪಟೇಲ್ ನಡೆಸಿಕೊಟ್ಟ ಸಂದರ್ಶನ ಲೇಖಕನ ಆಂತರ್ಯವನ್ನು ಹೊಕ್ಕು ನೋಡುವಂತೆ ಮಾಡಿತು.
ರಸಪ್ರಶ್ನೆ, ರಂಗ ತರಬೇತಿ, ಸಂವಿಧಾನದ ಅರ್ಥೈಸುವಿಕೆ, ಸ್ಥಳದಲ್ಲೇ ಕಲಾಕೃತಿ ರಚನೆ, ಮಣ್ಣಿನ ವಿಗ್ರಹ ತಯಾರಿಕೆ ಕುತೂಹಲದ ಕೇಂದ್ರಗಳಾಗಿದ್ದವು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.