ಬೆಂಗಳೂರು: ‘ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸಂಚಾರಕ್ಕೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಸೂಕ್ತ ನೀತಿಯೊಂದನ್ನು ರೂಪಿಸಲು ಒಂದು ತಿಂಗಳ ಸಮಯಾವಕಾಶ ನೀಡಿದ್ದರೂ, ಸರ್ಕಾರ ಈತನಕ ಕ್ರಮ ವಹಿಸದೆ ನಿರಾಸಕ್ತಿ ತೋರುತ್ತಿದೆ’ ಎಂದು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಈ ಸಂಬಂಧದ ರಿಟ್ ಮೇಲ್ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ನಡೆಸಿತು.
ಸರ್ಕಾರದ ಪರ ಹಾಜರಾಗಿದ್ದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ಅವರು, ‘ರಾಜ್ಯದಲ್ಲಿ ಪ್ರಯಾಣಿಕರ ಬಳಕೆಗಾಗಿ ಬೈಕ್ ಟ್ಯಾಕ್ಸಿ ಓಡಿಸಲು ಸರ್ಕಾರ ಅನುಮತಿ ನೀಡಿಲ್ಲ. ಬೈಕ್ಗಳನ್ನು ಡೆಲಿವರಿಗಾಗಿ (ವಿತರಣೆ) ಬಳಸಲು ಮಾತ್ರವೇ ಅವಕಾಶ ನೀಡಲಾಗಿದೆ. ಡೆಲಿವರಿಗಾಗಿ ಟ್ಯಾಕ್ಸಿ ಎಂದು ನೋಂದಣಿ ಮಾಡಿಸುವ ಅಗತ್ಯವಿಲ್ಲ. ಬೈಕ್ಗಳನ್ನು ಡೆಲಿವರಿಗೆ ಬಳಸುವವರಿಗೆ ನೀತಿ ರೂಪಿಸಿದ್ದೇವೆ. ಆದರೆ ಪ್ರಯಾಣಿಕರನ್ನು ಬೈಕ್ನಲ್ಲಿ ಕರೆದೊಯ್ಯಲು ಅವಕಾಶವಿಲ್ಲ’ ಎಂದು ನ್ಯಾಯಪೀಠಕ್ಕೆ ಸ್ಪಷ್ಟಪಡಿಸಿದರು.
‘ಕೆಲವು ಟ್ಯಾಕ್ಸಿ ಕಂಪನಿಗಳು ಅನುಮತಿ ಇಲ್ಲದಿದ್ದರೂ ಬೈಕ್ ಟ್ಯಾಕ್ಸಿಗಳನ್ನು ಪ್ರಯಾಣಿಕರಿಗಾಗಿ ಬಳಸುತ್ತಿವೆ. ಅಂತಹ ಬೈಕ್ ಟ್ಯಾಕ್ಸಿ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಇದೇ ವೇಳೆ ನ್ಯಾಯಪೀಠಕ್ಕೆ ಮನವಿ ಮಾಡಿದರು.
ಸರ್ಕಾರದ ವಾದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ‘ಬೈಕ್ ಟ್ಯಾಕ್ಸಿಗೆ ಅನುಮತಿ ನೀಡುವ ಕುರಿತು ನೀತಿ ರೂಪಿಸಲು ಒಂದು ತಿಂಗಳು ಸಮಯ ನೀಡಿದ್ದರೂ ನೀವಿನ್ನೂ ಸೂಕ್ತ ನೀತಿ ರೂಪಿಸಿಲ್ಲ. ನ್ಯಾಯಾಲಯ ಸೂಚಿಸಿದ್ದು ಬೈಕ್ ಟ್ಯಾಕ್ಸಿ ವಿಚಾರ, ಆದರೆ ಇದೀಗ ನೀವು ಗಿಗ್ ಕಾರ್ಮಿಕರ ಬಗ್ಗೆ ಹೇಳುತ್ತಿದ್ದೀರಿ, ಇದನ್ನು ಒಪ್ಪಲಾಗದು’ ಎಂದು ಕಿಡಿ ಕಾರಿತು.
‘ಬೈಕ್ ಟ್ಯಾಕ್ಸಿ ಬಗ್ಗೆ ನಿಮ್ಮ ವಾದವೇನಿದೆ ಮಂಡಿಸಿ ನಂತರ ಸೂಕ್ತ ಆದೇಶ ಹೊರಡಿಸಲಾಗುವುದು’ ಎಂದು ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ನಿಗದಿಪಡಿಸಿತು.
ಕಳೆದ ತಿಂಗಳ 22ರಂದು ನ್ಯಾಯಾಲಯ, ‘ಬೈಕ್ ಟ್ಯಾಕ್ಸಿ ಸೇವೆ ನೀಡುವ ವ್ಯಕ್ತಿಗಳಿಗೆ ಕಿರುಕುಳ ನೀಡಬಾರದು’ ಎಂದು ರಾಜ್ಯ ಸರ್ಕಾರಕ್ಕೆ ಮೌಖಿಕವಾಗಿ ಸೂಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.