ಬಂಧನ
ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಬೈಕ್ ಸವಾರರೊಬ್ಬರನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜ್ಞಾನಭಾರತಿ ನಿವಾಸಿ ನವೀನ್ ಗೌಡ ಎಂಬಾತನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಜೂನ್ 21ರಂದು ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐಗಳಾದ ಸಿ.ಕುಮಾರ್ ಮತ್ತು ದ್ವಾರಕಾನಾಥ್ ಅವರು ಕೃಷ್ಣ ಅರಮನೆ ಹೋಟೆಲ್ ಸಮೀಪದಲ್ಲಿರುವ ಎಸ್ಬಿಐ ಬ್ಯಾಂಕ್ ಬಳಿ ವಾಹನ ತಪಾಸಣೆ ಕೈಗೊಂಡಿದ್ದರು. ಉಲ್ಲಾಳ ಕಡೆಯಿಂದ ಬೈಕ್ನಲ್ಲಿ ಹೆಲ್ಮೆಟ್ ಧರಿಸದೆ ಬರುತ್ತಿದ್ದ ಆರೋಪಿಯ ವಾಹನ ತಡೆದು, ತಪಾಸಣೆ ನಡೆಸಿದರು.
‘ಹೆಲ್ಮೆಟ್ ಧರಿಸದ ಕಾರಣಕ್ಕೆ ದಂಡ ಪಾವತಿಸುವಂತೆ ಆರೋಪಿಗೆ ಸೂಚಿಸಲಾಯಿತು. ಇದರಿಂದ ಕುಪಿತಗೊಂಡ ನವೀನ್ ಗೌಡ, ‘ದಂಡ ಹಾಕಲು ಹೇಳಿದವರು ಯಾರು? ಹೆಲ್ಮೆಟ್ ಧರಿಸುವುದಿಲ್ಲ, ದಂಡ ಪಾವತಿಸುವುದಿಲ್ಲ. ದಂಡ ವಿಧಿಸುತ್ತಿರುವುದನ್ನು ನೋಡಿಯೇ ಉದ್ದೇಶಪೂರ್ವಕವಾಗಿ ಹೆಲ್ಮೆಟ್ ಧರಿಸದೇ ಬಂದಿದ್ದೇನೆ. ನನ್ನ ಮೇಲೆ ದೌರ್ಜನ್ಯ ಮಾಡುತ್ತೀರಾ ಎಂದು ಏರುದನಿಯಲ್ಲಿ ಮಾತನಾಡಿದ್ದಾನೆ’ ಎಂದು ಪಿಎಸ್ಐ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.
‘ಅಲ್ಲದೇ ಜೆಡಿಎಸ್ನ ಸ್ಥಳೀಯ ಘಟಕದ ಅಧ್ಯಕ್ಷ ನಾನು ಎಂದು ಹೇಳಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಬಳಿಕ ನಾವು ನೀಡಿದ ನಿರ್ದೇಶನಗಳನ್ನು ಪಾಲಿಸದೇ ಬೈಕ್ ತೆಗೆದುಕೊಂಡು ಹೋಗಿದ್ದಾನೆ. ಕಾನೂನು ಪ್ರಕಾರ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಹೇಳಿದ್ದಾರೆ.
ಆರೋಪಿಯನ್ನು ಬಂಧಿಸಿ, ಬೈಕ್ ವಶಪಡಿಸಿಕೊಳ್ಳಲಾಗಿದೆ. ಆತ ಸ್ಥಳೀಯ ಘಟಕದ ಜೆಡಿಎಸ್ ಅಧ್ಯಕ್ಷ ಅಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.