
ಬೆಂಗಳೂರು:ವಿಧಾನ ಪರಿಷತ್ನಲ್ಲಿ ಈಗ ತೆರವಾಗಿರುವ ಮತ್ತು ಮುಂದಿನ ವರ್ಷ ತೆರವಾಗಲಿರುವ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮತ್ತು ಚುನಾವಣಾ ತಯಾರಿ ನಡೆಸಲು ಬಿಜೆಪಿ ಸಮಿತಿಯನ್ನು ರಚಿಸಿದೆ.
ನಗರದಲ್ಲಿ ಭಾನುವಾರ ನಡೆದ ಬಿಜೆಪಿ ಕೇಂದ್ರ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳ ಲಾಗಿದೆ. ಆರ್.ಅಶೋಕ, ಗೋವಿಂದ ಕಾರಜೋಳ, ಶ್ರೀರಾಮುಲು, ಸಿ.ಟಿ.ರವಿ ಅವರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಸಮಿತಿಯ ಸದಸ್ಯರು ಎಲ್ಲ ಕ್ಷೇತ್ರಗಳಿಗೆ ಭೇಟಿ ನೀಡಿ, ಅಭಿಪ್ರಾಯ ಸಂಗ್ರಹಿಸಲಿದೆ. ಜಿಬಿಎ ಚುನಾವಣೆಗೆ ತಂತ್ರ ರೂಪಿಸುವ ಕೆಲಸವನ್ನೂ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಬಿಜೆಪಿ ನಿಯೋಗದ ವರದಿ ಸಿದ್ಧವಾಗಿದೆ. ರಾಜ್ಯ ಸರ್ಕಾರವು ಯಾವ ಕ್ರಮ ತೆಗೆದುಕೊಳ್ಳಲಿದೆ ಎಂಬುದನ್ನು ಆಧರಿಸಿ, ಈ ಸಂಬಂದ ಹೋರಾಟ ರೂಪಿಸಲು ಕೇಂದ್ರ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿವೆ.
ಬಿಜೆಪಿಯ ದಾವಣಗೆರೆ ಮುಖಂಡರಾದ ಜಿ.ಎಂ.ಸಿದ್ದೇಶ್ವರ ಮತ್ತು ಎಂ.ಪಿ.ರೇಣುಕಾಚಾರ್ಯ ಅವರ ಬಣದವರ ಜತೆ ಸಭೆ ನಡೆಸಿದ ಪಕ್ಷದ ನಾಯಕರು, ಮಾಧ್ಯಮಗಳಿಗೆ ಹೇಳಿಕೆ ನೀಡಬಾರದು ಎಂದು ತಾಕೀತು ಮಾಡಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ರಾಜ್ಯ ಉಸ್ತುವಾರಿ ರಾಧಾಮೋಹನದಾಸ್ ಅಗರ್ವಾಲ್ ಅವರು ನಗರದಲ್ಲಿ ಭಾನುವಾರ ಸಂಜೆ ಎರಡೂ ಬಣದ ತಲಾ ಆರು ಮಂದಿಯ ಜತೆಗೆ ಪ್ರತ್ಯೇಕ ಸಭೆ ನಡೆಸಿದರು.
‘ಮೊದಲಿಗೆ ಜಿ.ಎಂ.ಸಿದ್ದೇಶ್ವರ ಅವರ ಬಣದವರ ಜತೆಗೆ ಸಭೆ ನಡೆಸಲಾಯಿತು. ಎಂ.ಪಿ.ರೇಣುಕಾಚಾರ್ಯ ಅವರು ಕಾಂಗ್ರೆಸ್ನವರೊಟ್ಟಿಗೆ ಒಪ್ಪಂದ ಮಾಡಿಕೊಂಡು, ತಮ್ಮ ಪತ್ನಿ ಚುನಾವಣೆಯಲ್ಲಿ ಸೋಲಲು ಕಾರಣರಾದರು ಎಂದು ಸಿದ್ದೇಶ್ವರ ಅವರು ದೂರಿದರು. ಇದಕ್ಕಾಗಿ ಅವರು ಕ್ಷಮೆಯಾಚಿಸಬೇಕು. ಜತೆಗೆ ಅವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು’ ಎಂದು ಮೂಲಗಳು ಮಾಹಿತಿ ನೀಡಿವೆ.
‘ರೇಣುಕಾಚಾರ್ಯ ಅವರ ಬಣದ ಸದಸ್ಯರೊಂದಿಗೆ ನಂತರ ಸಭೆ ನಡೆಸಲಾಯಿತು. ಸಿದ್ದೇಶ್ವರ ಅವರ ಆರೋಪದ ಬಗ್ಗೆ ವಿವರಣೆ ಕೇಳಲಾಯಿತು. ರೇಣುಕಾಚಾರ್ಯ ಅವರೂ ಸಿದ್ದೇಶ್ವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು’ ಎಂದು ತಿಳಿಸಿವೆ.
‘ಸಭೆಯಲ್ಲಿ ಏನಾಯಿತು ಎಂಬುದರ ಬಗ್ಗೆ ಹೊರಗೆ ಮಾತನಾಡಬಾರದು ಮತ್ತು ಮಾಧ್ಯಮಗಳಿಗೆ ಹೇಳಿಕೆ ನೀಡಬಾರದು ಎಂದು ಎರಡೂ ಬಣಗಳಿಗೆ ತಾಕೀತು ಮಾಡಲಾಗಿದೆ’ ಎಂದು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.