ಬೆಂಗಳೂರು: ಸ್ವಾತಂತ್ರ್ಯ ದಿನದ ಅಂಗವಾಗಿ ಮಂಗಳವಾರ ರಾಜ್ಯದ ಮನೆ, ಮನೆಯ ಮೇಲೂ ರಾಷ್ಟ್ರ ಧ್ವಜ ಹಾರಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ತಿಳಿಸಿದರು.
ಸುದ್ದಿಗಾರರ ಜತೆ ಭಾನುವಾರ ಮಾತನಾಡಿದ ಅವರು, ‘ಪಕ್ಷದ ರಾಜ್ಯ ಘಟಕದ ಕಚೇರಿಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಧ್ವಜಾರೋಹಣ ಮಾಡುವರು. ಜಿಲ್ಲೆ ಹಾಗೂ ಕೆಳಹಂತದ ಸಮಿತಿಗಳ ಕಚೇರಿಗಳಲ್ಲೂ ಕಾರ್ಯಕ್ರಮ ನಡೆಯಲಿದೆ. ಪಕ್ಷದ ಕಾರ್ಯಕರ್ತರು ಮನೆ, ಮನೆಯಲ್ಲೂ ರಾಷ್ಟ್ರ ಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯದ ಸಂಭ್ರಮ ಆಚರಿಸುವರು’ ಎಂದರು.
ಸ್ವಾತಂತ್ರ್ಯ ಬಂದ ಖುಷಿಯ ಜತೆಯಲ್ಲೇ ದೇಶ ವಿಭಜನೆಯಾದ ಕರಾಳ ಘಟನೆಯೂ ನಡೆಯಿತು. ಅದನ್ನು ನೆನಪಿಸುವುದಕ್ಕಾಗಿ ಸೋಮವಾರ ರಾತ್ರಿ ರಾಜ್ಯದಾದ್ಯಂತ ದೇಶ ವಿಭಜನೆಯ ಕತೆಯನ್ನು ತಿಳಿಸುವ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಘಟಕದ ಕಚೇರಿಯಲ್ಲಿ ನಡೆಯುವ ಪ್ರದರ್ಶನವನ್ನು ಶಾಸಕ ಆರ್. ಅಶೋಕ ಉದ್ಘಾಟಿಸುವರು. ಸಂಸದ ಪಿ.ಸಿ. ಮೋಹನ್ ಮತ್ತು ಹರೇಕಳ ಹಾಜಬ್ಬ ಭಾಗವಹಿಸುವರು ಎಂದು ತಿಳಿಸಿದರು.
ಸೋಮವಾರ ಸಂಜೆ ರಾಜ್ಯದ ವಿವಿಧೆಡೆ ಪಂಜಿನ ಮೆರವಣಿಗೆ ನಡೆಸಲಾಗುವುದು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆರು ಲಕ್ಷ ಗ್ರಾಮ ಪಂಚಾಯಿತಿಗಳಿಂದ ಮಣ್ಣು ಸಂಗ್ರಹಿಸಿ, ಅದನ್ನು ದೆಹಲಿಯ ಕರ್ತವ್ಯ ಪಥದಲ್ಲಿನ ವಾಟಿಕಾ ಉದ್ಯಾನಕ್ಕೆ ಬಳಸುವ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ರಾಜ್ಯದಲ್ಲಿ 7,500 ಐತಿಹಾಸಿಕ ಸ್ಥಳಗಳಿಂದ ಮಣ್ಣು ಸಂಗ್ರಹಿಸುವ ಕೆಲಸವೂ ಸೋಮವಾರ ನಡೆಯಲಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.