ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಯ ಹೊಸ್ತಿಲಲ್ಲಿ ಧರ್ಮದ ಆಧಾರದ ಮೇಲೆ ಸಮಾಜ ಒಡೆಯುವ ಮಾತುಗಳನ್ನಾಡಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಪ್ರೊ.ಬಿ.ಕೆ. ಚಂದ್ರಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಅಧಿಕಾರದಲ್ಲಿ ಉಳಿಯಲು ಮೋದಿ ಅವರಿಗೆ ವಾಸ್ತವಾಂಶಕ್ಕಿಂತ ಮತವು ಅವಶ್ಯವಾದ ಸರಕಾಗಿದೆ. ಅವರು ಭಾಷಣದಲ್ಲಿ ಮುಸ್ಲಿಮರು ಎಂದು ಹೆಸರಿಸದೇ ‘ಯಾರು ಬಹಳಷ್ಟು ಮಕ್ಕಳಿಗೆ ಜನ್ಮ ಕೊಟ್ಟಿದ್ದಾರೋ’ ಎಂದು ಹೇಳಿದ್ದಾರೆ. ‘ನಿಮ್ಮ ಮಾಂಗಲ್ಯವೂ ಸೇರಿದಂತೆ ಎಲ್ಲವನ್ನೂ ಅವರಿಗೆ ಹಂಚುವ ಯೋಜನೆ ಕಾಂಗ್ರೆಸ್ ಪಕ್ಷಕ್ಕಿದೆ’ ಎಂದಿದ್ದಾರೆ. ಕೇಂದ್ರ ಸರ್ಕಾರದ 2019–21ರ ಅಂಕಿ-ಅಂಶಗಳ ಪ್ರಕಾರ ಮುಸ್ಲಿಂ ಮಹಿಳೆಯರು ಜನ್ಮಕೊಡುವ ಮಕ್ಕಳ ಸಂಖ್ಯೆ ಇಳಿಮುಖವಾಗಿದೆ. ದೇಶದ ಬಹುಪಾಲು ಜನರಿಗೆ ಈ ವಿಷಯ ತಿಳಿದಿಲ್ಲವೆಂದು ಮೋದಿಯವರು ನಂಬಿರಬಹುದು’ ಎಂದು ತಿಳಿಸಿದ್ದಾರೆ.
‘ಹಿಂದೂ ಮಹಿಳೆಯರ ಸಂತಾನೋತ್ಪತ್ತಿ ಪ್ರಮಾಣ ಶೇ 1.94ರಷ್ಟಿದ್ದು, ಮುಸ್ಲಿಂ ಮಹಿಳೆಯರಲ್ಲಿ ಈ ಪ್ರಮಾಣ ಶೇ 2.36ರಷ್ಟಿದೆ. ಶಿಕ್ಷಣ ಪಡೆಯುತ್ತಿರುವುದರಿಂದಾಗಿ ಮುಸ್ಲಿಂ ಮಹಿಳೆಯರಲ್ಲಿ ಈ ಪ್ರಮಾಣ ಕಡಿಮೆಯಾಗುತ್ತಿದೆ. 1998-99ರ ವೇಳೆ ಮುಸ್ಲಿಂ ಸಮುದಾಯದಲ್ಲಿ ಶೇ 37ರಷ್ಟು ಮಹಿಳೆಯರು ಗರ್ಭನಿರೋಧಕವನ್ನು ಬಳಸುತ್ತಿದ್ದರು. 2019–21ರ ಅಂಕಿ ಅಂಶಗಳ ಪ್ರಕಾರ ಅದು ಶೇ 60.20ಕ್ಕೆ ಏರಿದೆ. ಅಂದರೆ, ಶೇ 23.2 ರಷ್ಟು ಹೆಚ್ಚಾಗಿದೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.