ಬೆಂಗಳೂರು: ಫೇಸ್ಬುಕ್ನಲ್ಲಿ ಪರಿಚಯವಾಗಿ ಸುಬ್ರಮಣ್ಯ ಎಂಬುವರನ್ನು ಬ್ಲ್ಯಾಕ್ಮೇಲ್ ಮಾಡಿ ಚಿನ್ನದ ಸರ ಹಾಗೂ ನಗದು ಕಿತ್ತುಕೊಂಡಿದ್ದ ಮೂವರು ಆರೋಪಿಗಳನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.
ಸ್ಥಳೀಯ ನಿವಾಸಿಗಳಾದ ಅಕ್ಷಯ್, ಕಿರಣ್ ಹಾಗೂ ಮನು ಬಂಧಿತರು.
‘ಕೋಣನಕುಂಟೆ ನಿವಾಸಿ ಸುಬ್ರಮಣ್ಯ ಅವರ ಜೊತೆ ಫೇಸ್ಬುಕ್ನಲ್ಲಿ ಚಾಟಿಂಗ್ ಮಾಡಲಾರಂಭಿಸಿದ್ದ ಆರೋಪಿಗಳು, ‘ಪರಿಚಯಸ್ಥ ಯುವತಿ ಇದ್ದಾಳೆ. ನೀನು ಬಂದರೆ ಆಕೆ ಜೊತೆ ದಿನ ಕಳೆಯಬಹುದು’ ಎಂಬುದಾಗಿ ಜ. 4ರಂದು ಬೆಳಿಗ್ಗೆ ಹೇಳಿದ್ದರು’ ಎಂದು ಪೊಲೀಸರು ಹೇಳಿದರು.
‘ಅವರ ಮಾತು ನಂಬಿದ್ದ ಸುಬ್ರಮಣ್ಯ, ಹುಳಿಮಾವು ಬಳಿ ರಾತ್ರಿ ಬಂದಿದ್ದರು. ಅಲ್ಲಿಗೆ ಬಂದಿದ್ದ ಆರೋಪಿಗಳು, ‘ನಾವು ಪೊಲೀಸರು. ನೀನು ಯುವತಿಯನ್ನು ಅತ್ಯಾಚಾರ ಮಾಡಲು ಬಂದಿದ್ದಿಯಾ ಎಂಬ ಮಾಹಿತಿ ಇದೆ. ₹50 ಸಾವಿರ ಕೊಟ್ಟರೆ ಬಿಟ್ಟು ಕಳುಹಿಸುತ್ತೇವೆ. ಇಲ್ಲದಿದ್ದರೆ, ಬಂಧಿಸಿ ಠಾಣೆಗೆ ಕರೆದೊಯ್ಯುತ್ತೇವೆ’ ಎಂದಿದ್ದರು. ಭಯಗೊಂಡಿದ್ದ ಸುಬ್ರಮಣ್ಯ, ಮನೆಗೆ ಕರೆದುಕೊಂಡು ಹೋಗಿ ಚಿನ್ನದ ಸರ ಹಾಗೂ ₹2 ಸಾವಿರ ನಗದು ಕೊಟ್ಟಿದ್ದರು. ಅಷ್ಟಾದರೂ ಆರೋಪಿಗಳು, ಹೆಚ್ಚಿನ ಹಣ ಕೇಳಿದ್ದರು’
‘ಸ್ನೇಹಿತನಿಗೆ ವಿಷಯ ತಿಳಿಸಿದ್ದ ಸುಬ್ರಮಣ್ಯ, ₹20 ಸಾವಿರ ಸಾಲ ಕೇಳಿದ್ದರು. ಆ ಸ್ನೇಹಿತನೇ ಠಾಣೆಗೆ ವಿಷಯ ತಿಳಿಸಿದ್ದ. ಹೊಯ್ಸಳ ವಾಹನದಲ್ಲಿ ಸಿಬ್ಬಂದಿ ಸ್ಥಳಕ್ಕೆ ಹೋಗುವಷ್ಟರಲ್ಲೇ ಆರೋಪಿಗಳು ಪರಾರಿಯಾಗಿದ್ದರು. ಅವರ ಬಳಸಿದ್ದ ಜೂಮ್ ಕಾರು ಆಧರಿಸಿ ಮೂವರನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.