ADVERTISEMENT

ರಕ್ತದ ಕ್ಯಾನ್ಸರ್: ಆರೋಗ್ಯವಂತರು ಆಕರಕೋಶ ದಾನಮಾಡಲು ಮುಂದೆಬರಬೇಕು -ವೈದ್ಯರ ಮನವಿ

​ಪ್ರಜಾವಾಣಿ ವಾರ್ತೆ
Published 27 ಮೇ 2021, 21:38 IST
Last Updated 27 ಮೇ 2021, 21:38 IST

ಬೆಂಗಳೂರು: ‘ರಕ್ತದ ಕ್ಯಾನ್ಸರ್ ಎದುರಿಸುತ್ತಿರುವವರನ್ನು ರಕ್ಷಿಸಲು ಬ್ಲಡ್‌ ಸ್ಟೆಮ್‌ ಸೆಲ್‌ (ರಕ್ತದ ಆಕರಕೋಶ) ಸಹಕಾರಿ. ಹಾಗಾಗಿ, ಆರೋಗ್ಯವಂತ ವ್ಯಕ್ತಿಗಳು ರಕ್ತದ ಆಕರಕೋಶ ದಾನಮಾಡಲು ಮುಂದೆಬರಬೇಕು’ ಎಂದು ವೈದ್ಯರು ಮನವಿ ಮಾಡಿದರು.

ವಿಶ್ವ ಕ್ಯಾನ್ಸರ್‌ ದಿನದ ಪ್ರಯುಕ್ತ ಜಾಗತಿಕ ರಕ್ತದ ಆಕರಕೋಶ ದಾನಿಗಳ ನೋಂದಣಿ ಸೇವಾ ಸಂಸ್ಥೆ ‘ಡಿಕೆಎಂಎಸ್-ಬಿಎಂಎಸ್‌ಟಿ ಫೌಂಡೇಷನ್’ ಗುರುವಾರ ಆಯೋಜಿಸಿದ ಆನ್‌ಲೈನ್ ಕಾರ್ಯಕ್ರಮದಲ್ಲಿ ರಕ್ತದ ಕಾಂಡಕೋಶ ದಾನದ ಬಗ್ಗೆ ದಾನಿಗಳು ಹಾಗೂ ರೋಗಿಗಳು ಜಾಗೃತಿ ಮೂಡಿಸಿದರು.

ದೆಹಲಿಯ ರಾಜೀವ್‌ ಗಾಂಧಿ ಕ್ಯಾನ್ಸರ್ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಅಸ್ಥಿಮಜ್ಜೆ ಕಸಿ ವಿಭಾಗದ ನಿರ್ದೇಶಕ ಡಾ. ದಿನೇಶ್ ಭುರಾನಿ ಮಾತನಾಡಿ, ‘ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳನ್ನು ಕಾಪಾಡಲು ರಕ್ತದ ಆಕರ ಕೋಶ ಸಹಾಯಕ. ದಾನಿಗಳ ರಕ್ತದಿಂದ ಆಕರ ಕೋಶಗಳನ್ನು ಪಡೆದು, ಅಸ್ಥಿಮಜ್ಜೆ ಹಾಳಾಗಿರುವಂತಹ ರೋಗಿಗಳಿಗೆ ಕಸಿ ಮಾಡಲಾಗುತ್ತದೆ. ಇದು ಅಗತ್ಯವಿರುವಂತಹ ರೋಗಿಗಳ ಕುಟುಂಬದಲ್ಲಿ ಹೊಂದಾಣಿಕೆಯಾಗಬಲ್ಲ ದಾನಿಗಳು ಸಿಗುವುದು ಶೇ 40ರಷ್ಟು ಮಾತ್ರ. ಉಳಿದವರು ಸಂಬಂಧಿಗಳಲ್ಲದ ದಾನಿಗಳ ಮೇಲೆ ಅವಲಂಬಿತರಾಗಬೇಕಾಗುತ್ತದೆ’ ಎಂದರು.

ADVERTISEMENT

‘ರಕ್ತದಿಂದ ಆಕರ ಕೋಶಗಳನ್ನು ಪಡೆಯುವ ಪ್ರಕ್ರಿಯೆ4ರಿಂದ 5 ಗಂಟೆಗಳಲ್ಲಿ ಮುಕ್ತಾಯವಾಗಲಿದೆ. ಕೇವಲ 200ರಿಂದ 250 ಎಂ.ಎಲ್ ರಕ್ತವನ್ನು ಮಾತ್ರ ಪಡೆಯಲಾಗುತ್ತದೆ. ದಾನಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ’ ಎಂದು ವಿವರಿಸಿದರು.

46 ಸಾವಿರ ನೋಂದಣಿ: ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ಯಾಟ್ರಿಕ್ ಪೌಲ್, ‘ದೇಶದಲ್ಲಿ ಕ್ಯಾನ್ಸರ್ ‍ಪ್ರಕರಣಗಳು ಹೆಚ್ಚುತ್ತಿದ್ದು, ಬಹುತೇಕ ರೋಗಿಗಳಿಗೆ ರಕ್ತದ ಆಕರ ಕೋಶ ಕಸಿ ಮಾಡಲಾಗುತ್ತಿದೆ. ಆದರೆ, ದಾನಿಗಳ ಕೊರತೆಯಿಂದಾಗಿ ಹಲವು ಮಂದಿ ಕಸಿಗೆ ಎದುರು ನೋಡುತ್ತಿದ್ದಾರೆ. ಕ್ಯಾನ್ಸರ್‌ಗಳಿಗೆ ರಕ್ತದ ಆಕರಕೋಶ ಕಸಿ ಪರಿಹಾರವಾಗಿದೆ. ನಮ್ಮ ರಿಜಿಸ್ಟ್ರಿಯಲ್ಲಿ 46 ಸಾವಿರಕ್ಕೂ ಅಧಿಕ ದಾನಿಗಳು ಹೆಸರು ನೋಂದಾಯಿಸಿದ್ದಾರೆ. ಭಾರತದಲ್ಲಿ ಎರಡು ವರ್ಷಗಳ ಅವಧಿಯಲ್ಲಿ 35 ರೋಗಿಗಳಿಗೆ ಹೊಂದಾಣಿಕೆಯಾಗುವ ರಕ್ತದ ಆಕರ ಕೋಶ ಒದಗಿಸಲಾಗಿದೆ’ ಎಂದು ಹೇಳಿದರು.

ಬೆಂಗಳೂರಿನರಕ್ತದ ಆಕರ ಕೋಶ ದಾನಿ ಅಭಿಷೇಕ ಬೋಪಣ್ಣ ಹಾಗೂ ಜಾರ್ಖಂಡ್‌ನ ರಕ್ತದ ಕ್ಯಾನ್ಸರ್ ರೋಗಿ ಕೀರ್ತಿ ತಮ್ಮ ಅನುಭವ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.