ADVERTISEMENT

ಅಂಬೇಡ್ಕರ್‌ ಪ್ರತಿಮೆ ಸ್ಥಾಪನೆ ಬಗ್ಗೆ BMRCL ಭರವಸೆ- ಪ್ರತಿಭಟನೆ ಅಂತ್ಯ

ಮೆಟ್ರೊ ಎಸ್‌ಸಿ–ಎಸ್‌ಟಿ ನೌಕರರು ನಾಲ್ಕು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆ ಅಂತ್ಯ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2024, 16:05 IST
Last Updated 2 ಫೆಬ್ರುವರಿ 2024, 16:05 IST
ಬೈಯಪ್ಪನಹಳ್ಳಿ ಮೆಟ್ರೊ ಡಿಪೊದಲ್ಲಿ ಬಿಎಂಆರ್‌ಸಿಎಲ್‌ ನೌಕರರು ಐದು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆ ಶುಕ್ರವಾರ ಕೊನೆಗೊಂಡಿತು
ಬೈಯಪ್ಪನಹಳ್ಳಿ ಮೆಟ್ರೊ ಡಿಪೊದಲ್ಲಿ ಬಿಎಂಆರ್‌ಸಿಎಲ್‌ ನೌಕರರು ಐದು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆ ಶುಕ್ರವಾರ ಕೊನೆಗೊಂಡಿತು   

ಬೆಂಗಳೂರು: ಬೈಯಪ್ಪನಹಳ್ಳಿ ಮೆಟ್ರೊ ಡಿಪೊದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆ ನಿರ್ಮಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರಿಂದ, ಬಿಎಂಆರ್‌ಸಿಎಲ್‌ ನೌಕರರು ಐದು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.

‘ಗಣರಾಜ್ಯೋತ್ಸವದ ಸಂದರ್ಭದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಭಾವಚಿತ್ರವಿಡಲು ಒಪ್ಪಿಗೆ ನೀಡದೇ ಅಪಮಾನ ಮಾಡಲಾಗಿದೆ. ಭಾವಚಿತ್ರ ನಿರಾಕರಿಸಿದ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್‌ ಲಿಮಿಟೆಡ್‌ (ಬಿಎಂಆರ್‌ಸಿಎಲ್‌) ಎಸ್‌ಸಿ–ಎಸ್‌ಟಿ ನೌಕರರು ಸೋಮವಾರದಿಂದ ಪ್ರತಿಭಟನೆ ನಡೆಸುತ್ತಿದ್ದರು.

ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್‌, ಹೈಕೋರ್ಟ್‌ ವಕೀಲ ಎನ್‌. ಅನಂತ ನಾಯಕ್‌ ಅವರು ಪ್ರತಿಭಟನಕಾರರು ಮತ್ತು ಬಿಎಂಆರ್‌ಸಿಎಲ್‌ ಅಧಿಕಾರಿಗಳ ನಡುವೆ ಶುಕ್ರವಾರ ಸಂಧಾನ ನಡೆಸಿದರು.

ADVERTISEMENT

‘ತಪ್ಪಿತಸ್ಥ ಅಧಿಕಾರಿಯ ವಿರುದ್ಧ ತನಿಖೆ ನಡೆಸಲು ಏಳು ಸದಸ್ಯರಿರುವ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿ ನೀಡುವ ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುವುದು. ಬೈಯಪ್ಪನಹಳ್ಳಿ ಡಿಪೊದಲ್ಲಿ ಅಂಬೇಡ್ಕರ್‌ ಪ್ರತಿಮೆ ನಿರ್ಮಿಸಲಾಗುವುದು. ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ ಸಹಿತ ರಾಷ್ಟ್ರಿಯ ಪ್ರಮುಖ ದಿನಗಳಂದು ಮಾಲಾರ್ಪಣೆ ಮಾಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ’ ಎಂದು ಸಂಧಾನಕಾರರು ಮಾಹಿತಿ ನೀಡಿದರು.

ಬಿಎಂಆರ್‌ಸಿಎಲ್‌ ಎಸ್‌ಸಿ–ಎಸ್‌ಟಿ ನೌಕರರು ಮತ್ತು ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಂತೋಷ್‌ ಆರ್‌., ಉಪಾಧ್ಯಕ್ಷ ಗೋಪಾಲ್‌ ಆರ್‌., ನವೀನ್‌ ಟಿ.ಆರ್‌., ಪ್ರಧಾನ ಕಾರ್ಯದರ್ಶಿ ಮೂರ್ತಿ ಆರ್‌.ವಿ., ಸಂಘಟನಾ ಕಾರ್ಯದರ್ಶಿ ವೀರಪ್ಪ, ಸದಸ್ಯರಾದ ಈರಣ್ಣ ವಿ.ಎಂ., ಅಜ್ಜಪ್ಪ, ರಘುನಂದನ್‌, ಮಂಜುನಾಥ್‌, ಹಿಂದುಳಿದ ವರ್ಗಗಳ ನಾಯಕರಾದ ಮಂಡ್ಯರವಿ, ರಾಕೇಶ್‌, ಜೋಸೆಫ್‌, ಮಂಜುನಾಥ್‌, ಮನೀಶ್‌, ಅರುಣ್‌ ಜೆ.ಟಿ., ಅಕ್ಷಯ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.