ಬೆಂಗಳೂರು: ’ದೊಡ್ಡ ಪದವಿ, ಪ್ರಶಸ್ತಿಗಳಿಂದ ನಾವು ವಿದ್ವಾಂಸರಾಗುವುದಿಲ್ಲ. ಅಧ್ಯಯನಶೀಲತೆ, ಬರವಣಿಗೆಯಲ್ಲಿನ ಶಕ್ತಿ, ಸತ್ವದಿಂದ ವಿದ್ವತ್ತು ಪಡೆಯುತ್ತೇವೆ’ ಎಂದು ಸಾಹಿತಿ ಹಂ.ಪ. ನಾಗರಾಜಯ್ಯ ಅಭಿಪ್ರಾಯಪಟ್ಟರು.
ಬಿಎಂಶ್ರೀ ಪ್ರತಿಷ್ಠಾನ ಆಯೋಜಿಸಿದ್ದ ಸಮಾರಂಭದಲ್ಲಿ ಕವಿ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಅವರಿಗೆ ‘ಶ್ರೀ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದ ಅವರು, ‘ಸತ್ವಯುತ, ವಿದ್ವತ್ಪೂರ್ಣ ಬರವಣಿಗೆ ಸಿದ್ದಲಿಂಗಯ್ಯ ಅವರಲ್ಲಿದೆ. ಬೌದ್ಧಿಕವಾಗಿ ಶ್ರೀಮಂತರಾಗಿರುವ ಅವರು ಮತ್ತೆ ಬರವಣಿಗೆ ಆರಂಭಿಸಬೇಕು’ ಎಂದು ಸಲಹೆ ನೀಡಿದರು.
‘ಇತ್ತೀಚಿನ ದಿನಗಳಲ್ಲಿ ಹಳಗನ್ನಡ ಸಾಹಿತ್ಯ ಕಡಿಮೆಯಾಗುತ್ತಿದೆ. ನಮ್ಮ ಸಾಹಿತ್ಯದ ಗುರುಪರಂಪರೆಯನ್ನು ಅಧ್ಯಯನ ಮಾಡಿ, ಹೊಸ ಬಗೆಯ ಸಾಹಿತ್ಯ ರಚನೆ ಮಾಡಬೇಕು’ ಎಂದರು.
ಕವಿ ಜಿ.ಎಸ್.ಸಿದ್ದಲಿಂಗಯ್ಯ, ‘ಸಾಹಿತಿಗಳು ಬೆಳೆಸುವ ಕಾಲ, ಬೆಳೆಯುವ ಕಾಲವೊಂದಿತ್ತು. ಅದು ಈಗ ಮರೆಯಾಗಿದೆ. ಪ್ರತಿಯೊಬ್ಬರೂ ತಮ್ಮನ್ನು ತಾವೇ ದೊಡ್ಡವರೆಂದುಕೊಂಡು ಬೀಗುತ್ತಿದ್ದಾರೆ. ಬಿಎಂಶ್ರೀ ಅವರ ವ್ಯಕ್ತಿತ್ವ ಅಗಾಧವಾಗಿತ್ತು. ಅವರು ಕುವೆಂಪುರಂತಹ ಶ್ರೇಷ್ಠ ಸಾಹಿತಿ ಕನ್ನಡಕ್ಕೆ ದೊರೆಯುವಂತೆ ಮಾಡಿದರು’ ಎಂದರು.
ಸಿದ್ದಲಿಂಗಯ್ಯನವರ ಪತ್ನಿ ಎಸ್.ಕೆ.ಪ್ರೇಮಾ, ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ. ಆರ್.ಲಕ್ಷ್ಮಿನಾರಾಯಣ, ಗೌರವ ಅಧ್ಯಕ್ಷ ಎಂ.ಎಚ್.ಕೃಷ್ಣಯ್ಯ, ನಿಕಟಪೂರ್ವ ಅಧ್ಯಕ್ಷ ಪಿ.ವಿ.ಲಕ್ಷ್ಮಿನಾರಾಯಣ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.