ADVERTISEMENT

ಬಿಎಂಟಿಸಿ ನೌಕರರ ಪ್ರೋತ್ಸಾಹ ಭತ್ಯೆಗೆ ಕತ್ತರಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 19:45 IST
Last Updated 16 ಜನವರಿ 2021, 19:45 IST
ಬಿಎಂಟಿಸಿ ಬಸ್
ಬಿಎಂಟಿಸಿ ಬಸ್   

ಬೆಂಗಳೂರು: ನೌಕರರಿಗೆ ಈ ತಿಂಗಳು ಅರ್ಧ ಸಂಬಳ ನೀಡಿರುವ ಸಾರಿಗೆ ಸಂಸ್ಥೆಗಳು, ಈಗ ಪ್ರೋತ್ಸಾಹ ಭತ್ಯೆ ಮತ್ತು ಊಟದ ಬಾಟಾ ತಡೆ ಹಿಡಿಯಲು ಮುಂದಾಗಿವೆ.

ಈ ಸಂಬಂಧ ಬಿಎಂಟಿಸಿ ಅಧಿಕೃತ ಆದೇಶ ಹೊರಡಿಸಿದೆ. ‘ಕೋವಿಡ್ ಕಾರಣದಿಂದ ಸರ್ಕಾರ ಹೊರಡಿಸಿರುವ ಆದೇಶದಲ್ಲಿರುವ ಷರತ್ತುಗಳಂತೆ ನೌಕರರಿಗೆ ವೇತನ ಹೊರತುಪಡಿಸಿ ಬೇರೆ ಯಾವ ಭತ್ಯೆ ನೀಡಲು ಆಗುವುದಿಲ್ಲ. ಆದ್ದರಿಂದ ಸರ್ಕಾರದ ಮುಂದಿನ ಆದೇಶದ ತನಕ ಭತ್ಯೆ ಪಾವತಿಸಕ್ಕದಲ್ಲ’ ಎಂದು ತಿಳಿಸಿದೆ.

‘ಡಿಸೆಂಬರ್ ತಿಂಗಳ ಸಂಬಳದಲ್ಲಿಸಂಕ್ರಾಂತಿ ಹಬ್ಬಕ್ಕಾಗಿ ಅರ್ಧದಷ್ಟು ಸಂಬಳವನ್ನು ಸಾರಿಗೆ ಸಂಸ್ಥೆಗಳು ಪಾವತಿಸಿವೆ. ಈಗ ಭತ್ಯೆಗಳನ್ನೂ ಕಡಿತ ಮಾಡುತ್ತಿದೆ. ಜೀವನ ಸಾಗಿಸುವುದು ಹೇಗೆ’ ಎಂಬುದು ನೌಕರರ ಪ್ರಶ್ನೆ.

ADVERTISEMENT

‘ಊಟದ ಬಾಟಾ ಎಂದು ದಿನಕ್ಕೆ ₹35 ಮತ್ತು ಎಲ್ಲಾ ಟ್ರಿಪ್‌ಗಳಿಗೂ ಸೇರಿ ₹35 ಪ್ರೋತ್ಸಾಹ ಭತ್ಯೆ ನೀಡಲಾಗುತ್ತಿತ್ತು. ಅದನ್ನೂ ನೀಡದಿದ್ದರೆ ಚಾಲಕ ಮತ್ತು ನಿರ್ವಾಹಕರು ಊಟ, ಉಪಾಹಾರ ಮಾಡುವುದು ಹೇಗೆ’ ಎಂದು ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರು ಪ್ರಶ್ನಿಸಿದರು.

‘ಪ್ರತಿಭಟನೆಯ ಸಂಧಾನ ಸಭೆಯಲ್ಲಿ ಎಲ್ಲಾ ರೀತಿಯ ಭತ್ಯೆಗಳನ್ನೂ ನೀಡುವುದಾಗಿ ಸರ್ಕಾರ ಒಪ್ಪಿಕೊಂಡಿತ್ತು. ಈಗ ಭತ್ಯೆ ಕಡಿತ ಮಾಡುತ್ತಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.