ಬೆಂಗಳೂರು: ಹೈಕೋರ್ಟ್ ಸೂಚನೆಯಂತೆ ಮುಷ್ಕರ ವಾಪಸ್ ಪಡೆದ ಸಾರಿಗೆ ನೌಕರರು, ಗುರುವಾರ ನೂಕುನುಗ್ಗಲಿನಲ್ಲಿ ಕರ್ತವ್ಯಕ್ಕೆ ಹಾಜರಾದರು.
ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಡಿಪೋಗಳ ಎದುರು ಗುರುವಾರ ಬೆಳಿಗ್ಗೆ ಚಾಲಕ ಮತ್ತು ನಿರ್ವಾಹಕರ ಮುಗಿ ಬಿದ್ದಿದ್ದರು. ಕರ್ತವಕ್ಕೆ ಹಾಜರಾಗಲು ಸಾಲುಗಟ್ಟಿ ನಿಂತಿದ್ದರು. ಆದರೆ, ಅವರಿಂದ ಮುಚ್ಚಳಿಕೆ ಬರೆಸಿಕೊಂಡು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ವಿಳಂಬವಾಯಿತು.
‘ಮುಷ್ಕರದ ಅವಧಿಯಲ್ಲಿ ನಾನು ಕರ್ತವ್ಯಕ್ಕೆ ಗೈರಾಗಿದ್ದು, ಇನ್ನು ಮುಂದೆ ಇಂತಹ ಯಾವುದೇ ಮುಷ್ಕರದಲ್ಲಿ ಭಾಗಿಯಾಗದೆ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಸ್ವಯಂ ದೃಢೀಕರಿಸುತ್ತೇನೆ’ ಎಂಬ ಮುದ್ರಿತ ಮುಚ್ಚಳಿಕೆಗೆ ನೌಕರರಿಂದ ಸಹಿ ಹಾಕಿಸಿಕೊಂಡು ಅಧಿಕಾರಿಗಳು ಕರ್ತವ್ಯಕ್ಕೆ ನಿಯೋಜಿಸಿದರು.
ಮುಷ್ಕರ ಇಲ್ಲದಿದ್ದರೆ ಬುಧವಾರ ಕೆಲಸಕ್ಕೆ ಹಾಜರಾದವರು ರಾತ್ರಿ ತಂಗುವ ಕರ್ತವ್ಯ ಮುಗಿಸಿ ಗುರುವಾರ ಬೆಳಿಗ್ಗೆ ಮನೆಗೆ ಹೋಗಬೇಕಿತ್ತು. ಆದರೆ, ಮುಷ್ಕರ ಬುಧವಾರ ಸಂಜೆ ವಾಪಸ್ ಪಡೆದ ಕಾರಣ ಎಲ್ಲ ನೌಕರರು ಗುರುವಾರ ಬೆಳಿಗ್ಗೆ ಡಿಪೋಗಳ ಮುಂದೆ ಹಾಜರಾದರು. ಎಲ್ಲರನ್ನು ಕರ್ತವ್ಯಕ್ಕೆ ಹಾಜರು ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಬಹುತೇಕರಿಗೆ ಕೆಲಸ ಮಾಡಲು ಅವಕಾಶ ಸಿಕ್ಕರೆ, ಕೆಲವರು ಮನೆಗೆ ವಾಪಸ್ ಹೋದರು.
ಈ ನಡುವೆ, ಅಮಾನತುಗೊಂಡಿದ್ದ ಸಿಬ್ಬಂದಿ ಕೂಡ ಡಿಪೋಗಳ ಮುಂದೆ ಬಂದಿದ್ದರು. ಆದರೆ, ಅವರನ್ನು ಕರ್ತವ್ಯಕ್ಕೆ ಹಾಜರು ಮಾಡಿಕೊಳ್ಳಲಿಲ್ಲ. ಅಮಾನತುಗೊಂಡಿರುವ ಸಿಬ್ಬಂದಿ ಸದ್ಯಕ್ಕೆ ಕರ್ತವ್ಯಕ್ಕೆ ಹಾಜರಾಗಲು ಆಗುವುದಿಲ್ಲ. ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಲಿದ್ದು, ಎಲ್ಲರನ್ನೂ ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಲಾಗುತ್ತದೆ. ಈ ಪ್ರಕ್ರಿಯೆಗಳು ನಡೆಯಲು ಕನಿಷ್ಠ 6 ತಿಂಗಳ ಕಾಲಾವಕಾಶ ಬೇಕಾಗಲಿದೆ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ವಜಾಗೊಂಡಿರುವ ಕಾಯಂ ಸಿಬ್ಬಂದಿ ಮತ್ತು ತರಬೇತಿ ಅವಧಿಯ ಸಿಬ್ಬಂದಿ ಮತ್ತೆ ಕರ್ತವ್ಯಕ್ಕೆ ಮರಳಲು ಅವಕಾಶ ಇಲ್ಲ ಎಂದು ಹೇಳಿದರು.
ಬಿಎಂಟಿಸಿಯ 6 ಸಾವಿರ ಬಸ್ಗಳಲ್ಲಿ ಗುರುವಾರ ಸಂಜೆ ವೇಳೆಗೆ 4,900 ಬಸ್ಗಳು ಕಾರ್ಯಾಚರಣೆಗೆ ಇಳಿದಿದ್ದವು. ಆದರೆ, ಕೋವಿಡ್ ಉಲ್ಬಣಗೊಂಡಿರುವ ಕಾರಣದಿಂದ ಪ್ರಯಾಣಿಕರಿಲ್ಲದೆ ಬಸ್ಗಳು ಖಾಲಿ ಖಾಲಿಯಾಗಿಯೇ ಸಂಚರಿಸಿದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.