ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ಕೆಲಸದಿಂದ ವಜಾಗೊಂಡಿದ್ದ ನೌಕರ ಇಮ್ರಾನ್ ಖಾನ್ (40) ಎಂಬುವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಅವರ ಮೃತದೇಹ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ.
‘ರಾಜಾಜಿನಗರದ ರಾಮಮಂದಿರ ಆಟದ ಮೈದಾನದಲ್ಲಿ ಇಮ್ರಾನ್ ಮೃತದೇಹ ಪತ್ತೆಯಾಗಿದೆ. ಅದನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಕುಟುಂಬಸ್ಥರು ನೀಡಿರುವ ದೂರು ಆಧರಿಸಿ ರಾಜಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಇಮ್ರಾನ್ ಅವರು ಬಿಎಂಟಿಸಿಯಲ್ಲಿ ಹಲವು ವರ್ಷಗಳಿಂದ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಅವರು ಚಲಾಯಸುತ್ತಿದ್ದ ಬಸ್ ಇತ್ತೀಚೆಗೆ ಅಪಘಾತಕ್ಕೀಡಾಗಿತ್ತು. ಇದೇ ಪ್ರಕರಣದಲ್ಲಿ ಇಮ್ರಾನ್ ಅವರನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಇದರಿಂದ ಅವರು ನೊಂದಿದ್ದರೆಂಬ ಮಾಹಿತಿ ಲಭ್ಯವಾಗಿದೆ’ ಎಂದೂ ತಿಳಿಸಿದರು.
ಗಾಯದ ಗುರುತು: ‘ಮೈದಾನಕ್ಕೆ ಬಂದಿದ್ದ ಸ್ಥಳೀಯರೊಬ್ಬರು, ಮೃತದೇಹ ನೋಡಿ ಠಾಣೆಗೆ ಮಾಹಿತಿ ನೀಡಿದ್ದರು. ಮೃತದೇಹದ ಮೇಲೆ ಸಣ್ಣ ಗಾಯದ ಗುರುತುಗಳಿದ್ದು, ಸಾವಿನಲ್ಲಿ ಅನುಮಾನವಿರುವುದಾಗಿ ಕುಟುಂಬಸ್ಥರು ಹೇಳುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವೇ ನಿಖರ ಮಾಹಿತಿ ಸಿಗಲಿದೆ’ ಎಂದು ಪೊಲೀಸ್ ಅಧಿಕಾರಿ ಹೇಳಿದರು.
‘ರಾಜಾಜಿನಗರದಲ್ಲಿ ಪತ್ನಿ ಜೊತೆ ವಾಸವಿದ್ದ ಇಮ್ರಾನ್, ಕೆಲಸವಿರುವುದಾಗಿ ಹೇಳಿ ಮನೆಯಿಂದ ಹೊರಗೆ ಬಂದಿದ್ದರೆಂಬುದು ಗೊತ್ತಾಗಿದೆ. ಇಮ್ರಾನ್ ಪ್ಯಾಂಟಿನ ಜೇಬಿನಲ್ಲಿ ಮದ್ಯದ ಬಾಟಲಿ ಸಿಕ್ಕಿದೆ’ ಎಂದೂ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.