ಬೆಂಗಳೂರು: ಗುತ್ತಿಗೆದಾರನ ಹೆಸರಿನಲ್ಲಿ ಬ್ಯಾಂಕೊಂದರಲ್ಲಿ ನಕಲಿ ಖಾತೆ ತೆರೆದು, ಅಕ್ರಮವಾಗಿ ₹ 4.15 ಕೋಟಿ ಹಣ ವರ್ಗಾ ವಣೆ ಮಾಡಿ ಬಿಬಿಎಂಪಿಗೆ ವಂಚಿಸಿದ್ದ ಪ್ರಕರಣ ಸಂಬಂಧ ದ್ವಿತೀಯ ದರ್ಜೆ ಸಹಾಯಕ (ಎಸ್ಡಿಎ) ರಾಘವೇಂದ್ರ ಎಂಬುವರನ್ನು ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ಪೊಲೀಸರು ಬಂಧಿಸಿದ್ದಾರೆ.
ಜನತಾ ಸೇವಾ ಕೋ–ಆಪರೇಟಿವ್ ಬ್ಯಾಂಕ್ನಲ್ಲಿ ಗುತ್ತಿಗೆದಾರ ಸಿ.ಜಿ. ಚಂದ್ರಪ್ಪ ಅವರ ಹೆಸರಿನಲ್ಲಿ ನಕಲಿ ಖಾತೆ ತೆರೆದು ವಂಚಿಸಲಾಗಿತ್ತು.
‘ಆರೋಪಿ ರಾಘವೇಂದ್ರ, ಅಕ್ರಮ ಹಣ ವರ್ಗಾವಣೆ ಕಡತ ಸಮೇತ ತಲೆಮರೆ ಸಿಕೊಂಡಿದ್ದ. ಇತ್ತೀಚೆಗೆ ಮಲೆಮಹದೇಶ್ವರ ಬೆಟ್ಟದಲ್ಲಿ ಕಾಣಿಸಿಕೊಂಡಿದ್ದ. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಲಾಗಿದೆ’ ಎಂದು ಬಿಎಂಟಿಎಫ್ ಅಧಿಕಾರಿಯೊಬ್ಬರು ಹೇಳಿದರು.
‘ಆತನ ವಿಚಾರಣೆ ನಡೆಸಿದಾಗ, ಕಡತ ತನ್ನ ಬಳಿ ಇಲ್ಲವೆಂದು ವಾದಿಸುತ್ತಿದ್ದಾನೆ. ಇನ್ನೊಬ್ಬ ಆರೋಪಿ ಅನಿತಾ ಬಳಿ ಕಡತ ಇರುವುದಾಗಿ ಸುಳ್ಳು ಹೇಳಿ ದಿಕ್ಕು ತಪ್ಪಿಸುತ್ತಿದ್ದಾನೆ. ಈತ ರೌಡಿ ಪಾನಿಪುರಿ ಮಂಜನ ಸಹೋದರ ಎಂದು ತನಿಖೆಯಿಂದ ಗೊತ್ತಾಗಿದೆ. ಹಣದ ಆಸೆಗಾಗಿ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.