ADVERTISEMENT

ಚರ್ಚ್‌ನಲ್ಲಿ ಬಾಂಬ್ ಇಡುವಂತೆ ಕರೆ; ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 20:41 IST
Last Updated 26 ಏಪ್ರಿಲ್ 2019, 20:41 IST

ಬೆಂಗಳೂರು: ‘ನಾವು ಹೇಳಿದ ಚರ್ಚ್‌ನಲ್ಲಿ ಬಾಂಬ್‌ ಇಡಿ’ ಎಂದು ಅಪರಿಚಿತರು ಮೊಬೈಲ್‌ಗೆ ಕರೆ ಮಾಡಿ ಹೇಳಿದ್ದರಿಂದ ಗಾಬರಿಗೊಂಡ ಕ್ಯಾಬ್‌ ಚಾಲಕ ಲಿಂಗರಾಜು ಎಂಬುವರು ಅಶೋಕನಗರ ಠಾಣೆಗೆ ದೂರು ನೀಡಿದ್ದಾರೆ.

‘ಅಶೋಕನಗರ ನಿವಾಸಿಯಾದ ಲಿಂಗರಾಜು, ಹಲವು ವರ್ಷಗಳಿಂದ ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ನೀಡಿರುವ ದೂರು ಆಧರಿಸಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಲಿಂಗರಾಜು ಅವರು ಗುರುವಾರ ಬೆಳಿಗ್ಗೆ ಗರುಡಾ ಮಾಲ್ ಬಳಿ ಇದ್ದರು. ಅವರ ಮೊಬೈಲ್‌ಗೆ ಅಪರಿಚಿತರು ಕರೆ ಮಾಡಿದ್ದರು. ಅದನ್ನು ಸ್ವೀಕರಿಸುತ್ತಿದ್ದಂತೆ ಕರೆ ಕಡಿತಗೊಂಡಿತ್ತು.’

ADVERTISEMENT

‘ಅದಾದ ಕೆಲ ನಿಮಿಷಗಳ ಬಳಿಕ ಪುನಃ ಕರೆ ಮಾಡಿದ್ದ ಅಪರಿಚಿತ, ‘ನಿಮ್ಮ ಬ್ಯಾಂಕ್‌ ಖಾತೆಯ ಸಂಖ್ಯೆಯನ್ನು ಮೊಬೈಲ್‌ ನಂಬರ್‌ಗೆ ಕಳುಹಿಸಿ. ನೀವು ಕೇಳಿದಷ್ಟು ಹಣವನ್ನು ಖಾತೆಗೆ ಹಾಕುತ್ತೇವೆ. ಹಣ ತಲುಪಿದ ನಂತರ, ನಾವು ಹೇಳಿದ ಚರ್ಚ್‌ಗೆ ನೀವು ಬಾಂಬ್‌ ಇಡಬೇಕು’ ಎಂದು ಹೇಳಿದ್ದರು. ಗಾಬರಿಗೊಂಡ ಲಿಂಗರಾಜು, ಕರೆ ಕಡಿತಗೊಳಿಸಿ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದು ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.