ಬೆಂಗಳೂರು: ಶಿವಾಜಿನಗರದ ಆಜಂ ಮಸೀದಿಯಲ್ಲಿ ಬಾಂಬ್ ಇರಿಸಲಾಗಿದೆ ಎಂದು ಹುಸಿ ಕರೆ ಮಾಡಿದ್ದ ಆರೋಪಿ, ಮಹಾರಾಷ್ಟ್ರದ ನಿವಾಸಿ ಸೈಯದ್ ಮಹಮ್ಮದ್ ಅನ್ವರ್ (37) ಎಂಬಾತನನ್ನು ಶಿವಾಜಿನಗರದ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ತೆಲಂಗಾಣದಲ್ಲಿ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆ ತರಲಾಗಿದೆ.
‘ಆರೋಪಿ ಪದವೀಧರನಾಗಿದ್ದ. ಎಲ್ಲಿಯೂ ಕೆಲಸ ಮಾಡುತ್ತಿರಲಿಲ್ಲ. ಬೇರೆ ಬೇರೆ ರಾಜ್ಯಗಳಿಗೆ ತೆರಳಿ ಅಲ್ಲಿನ ಮಸೀದಿಗಳಲ್ಲಿ ಚಂದಾ ವಸೂಲಿ ಮಾಡುತ್ತಿದ್ದ. ಜುಲೈ 4ರಂದು ಬೆಂಗಳೂರಿಗೂ ಆರೋಪಿ ಬಂದಿದ್ದ. ಶಿವಾಜಿನಗರದ ರಸೆಲ್ ಮಾರುಕಟ್ಟೆ ಹಿಂಭಾಗದ ಆಜಾಂ ಮಸೀದಿಗೂ ಬಂದಿದ್ದ. ಅಲ್ಲಿ ಚಂದಾ ಪಡೆದುಕೊಂಡಿದ್ದ. ರಾತ್ರಿಯಾಗಿದ್ದರಿಂದ ಮಸೀದಿಯಲ್ಲೇ ವಾಸ್ತವ್ಯಕ್ಕೆ ಅವಕಾಶ ನೀಡುವಂತೆ ಸಿಬ್ಬಂದಿಯನ್ನು ಕೋರಿಕೊಂಡಿದ್ದ. ಮಸೀದಿ ಸಿಬ್ಬಂದಿ ಅವಕಾಶ ನೀಡಿರಲಿಲ್ಲ. ಇದರಿಂದ ಸಿಟ್ಟಿಗೆದ್ದು, ಮಸೀದಿಗೆ ಬಾಂಬ್ ಇಡಲಾಗಿದೆ ಎಂದು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದ’ ಎಂದು ಮೂಲಗಳು ತಿಳಿಸಿವೆ.
‘ತಕ್ಷಣವೇ ಮಸೀದಿಗೆ ತೆರಳಿ ಪರಿಶೀಲನೆ ನಡೆಸಲಾಗಿತ್ತು. ಅಲ್ಲಿ ಯಾವುದೇ ಬಾಂಬ್ ಇರಲಿಲ್ಲ. ಇದೊಂದು ಹುಸಿ ಬಾಂಬ್ ಕರೆ ಎಂದು ಗೊತ್ತಾಯಿತು. ಆರೋಪಿ ಕರೆ ಮಾಡಿದ್ದ ಮೊಬೈಲ್ ನಂಬರ್ನ ಲೊಕೇಶನ್ ಆಧರಿಸಿ ತೆಲಂಗಾಣಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ ಕರೆ ತರಲಾಯಿತು’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.