ADVERTISEMENT

ಪ್ಲಾಸ್ಟಿಕ್ ಬಳಕೆ ವಿರುದ್ಧ ಪಾಲಿಕೆ ಕ್ರಮ: 16 ವಾರ್ಡುಗಳಲ್ಲಿ ಜಪ್ತಿ

ಬೊಮ್ಮನಹಳ್ಳಿ ವಲಯ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 19:41 IST
Last Updated 18 ಜೂನ್ 2019, 19:41 IST
ತಳ್ಳುಗಾಡಿ ವ್ಯಾಪಾರಿಯನ್ನು ಸತೀಶ್ ರೆಡ್ಡಿ ಸನ್ಮಾನಿಸಿದರು. ಜಂಟಿ ಆಯುಕ್ತೆ ಸೌಜನ್ಯಾ, ಪಾಲಿಕೆ ಸದಸ್ಯ ರಾಮಮೋಹನರಾಜ್ ಇದ್ದಾರೆ.
ತಳ್ಳುಗಾಡಿ ವ್ಯಾಪಾರಿಯನ್ನು ಸತೀಶ್ ರೆಡ್ಡಿ ಸನ್ಮಾನಿಸಿದರು. ಜಂಟಿ ಆಯುಕ್ತೆ ಸೌಜನ್ಯಾ, ಪಾಲಿಕೆ ಸದಸ್ಯ ರಾಮಮೋಹನರಾಜ್ ಇದ್ದಾರೆ.   

ಬೊಮ್ಮನಹಳ್ಳಿ: ಬಿಬಿಎಂಪಿ ಅಧಿಕಾರಿಗಳು ಬೊಮ್ಮನಹಳ್ಳಿ ವಲಯದ 16 ವಾರ್ಡುಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಜಪ್ತಿ ಮಾಡುವ ಕಾರ್ಯವನ್ನು ಮಂಗಳವಾರ ನಡೆಸಿದರು.

ಬೊಮ್ಮನಹಳ್ಳಿಯ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಬೆಳಿಗ್ಗೆಯೇ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಹಾಗು ಸಿಬ್ಬಂದಿ ಪ್ಲಾಸ್ಟಿಕ್ ವಸ್ತುಗಳಿದ್ದ ಅಂಗಡಿಗಳಿಗೆ ದಾಳಿ ನಡೆಸಿ ವಶಕ್ಕೆ ಪಡೆಯುವ ಜತೆಗೆ ಸ್ಥಳದಲ್ಲೇ ₹22 ಸಾವಿರ ದಂಡವನ್ನೂ ವಿಧಿಸಿದರು. ಕೆಲ ಅಂಗಡಿಗಳ ಬಾಗಿಲು ಮುಚ್ಚಿಸಿದರು.

ಪಿಜಿ ಕಟ್ಟಡದಲ್ಲಿ ಕೊಳೆತ ಆಹಾರ: ಪಿಜಿ ಕಟ್ಟಡವೊಂದರಲ್ಲಿ ಕೊಳೆತ ಆಹಾರವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಡಲಾಗಿತ್ತು. ಊಟದ ಹಾಲ್‌ನಲ್ಲೇ ಇಡಲಾಗಿದ್ದ ಚೀಲಗಳಿಂದ ಗಬ್ಬು ವಾಸನೆ ಬೀರುತ್ತಿದ್ದರೂ, ಅದನ್ನು ವಿಲೇವಾರಿ ಮಾಡಿರಲಿಲ್ಲ. ಕಾರಣ ಕೇಳಿದ್ದಕ್ಕೆ ಪಿಜಿ ಕಟ್ಟಡದ ಮಾಲೀಕರಿಂದ ಮೌನವೇ ಉತ್ತರವಾಗಿತ್ತು. ಇದರಿಂದ ಕುಪಿತಗೊಂಡ ಪಾಲಿಕೆಯ ಜಂಟಿ ಆಯುಕ್ತೆ ಸೌಜನ್ಯಾ ₹10 ಸಾವಿರ ದಂಡ ವಿಧಿಸಿದರು.

ADVERTISEMENT

ತಳ್ಳು ಗಾಡಿಯಲ್ಲಿ ಹೂವು ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬ ಪೇಪರ್ ಚೀಲ ಬಳಸುತ್ತಿದ್ದುದನ್ನು ಕಂಡು ಶಾಸಕ ಸತೀಶ್ ರೆಡ್ಡಿ ಹೂವಿನ ಹಾರ ಹಾಕಿ ಸನ್ಮಾನಿಸಿದರು.

‘ತಮಿಳುನಾಡಿನಲ್ಲಿ ಪ್ಲಾಸ್ಟಿಕ್ ನಿಷೇಧ ಅಭಿಯಾನ ಯಶಸ್ವಿಯಾಗಿದೆ. ನಮ್ಮಲ್ಲಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಪಾಲಿಕೆಯ ಜತೆ ಸಹಕರಿಸುತ್ತಿಲ್ಲ. ಎಚ್ಚರಿಕೆಯ ನಂತರವೂ ಪ್ಲಾಸ್ಟಿಕ್ ಬಳಸಿದ್ದಲ್ಲಿ ₹2.5 ಲಕ್ಷವರೆಗೆ ದಂಡ ವಿಧಿಸಲು ಅವಕಾಶವಿದ್ದು, ಅದನ್ನು ಪಾಲಿಸಬೇಕಾಗುತ್ತದೆ. ಜತೆಗೆ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನಾ ಘಟಕಗಳ ಮೇಲೂ ದಾಳಿ ನಡೆಸುತ್ತೇವೆ’ ಎಂದು ಸೌಜನ್ಯಾ ತಿಳಿಸಿದರು.

‘ಮೂರು ವರ್ಷಗಳಿಂದ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ಪ್ರಯತ್ನಿಸಿದರೂ ನಿರೀಕ್ಷಿತ ಫಲ ಸಿಕ್ಕಿಲ್ಲ. ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು’ ಎಂದು ಸತೀಶ್ ರೆಡ್ಡಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.