ADVERTISEMENT

ಧರ್ಮಗಳ ಬಗ್ಗೆ ಮಾತನಾಡುವುದು ತಂತಿಯ ಮೇಲಿನ ನಡಿಗೆ: ಶಂಕರ್

‘ನವಿಲು ಪುರಾಣ’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 20:07 IST
Last Updated 5 ಜನವರಿ 2021, 20:07 IST
ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರು ‘ನವಿಲು ಪುರಾಣ’ ಪುಸ್ತಕ ಬಿಡುಗಡೆ ಮಾಡಿದರು. (ಎಡದಿಂದ) ಲೇಖಕ ಪ್ರೊ.ಕೆ.ಈ. ರಾಧಾಕೃಷ್ಣ, ಬಿ.ಎಲ್. ಶಂಕರ್, ಜೆಡಿಎಸ್ ಮುಖಂಡ ವೈ.ಎಸ್.ವಿ. ದತ್ತ, ಲೇಖಕ ಎಚ್.ಟಿ. ಪೋತೆ ಮತ್ತು ಲಲಿತ ಕಲಾ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಎಂ.ಎಸ್. ಮೂರ್ತಿ ಇದ್ದರು - ಪ್ರಜಾವಾಣಿ ಚಿತ್ರ
ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರು ‘ನವಿಲು ಪುರಾಣ’ ಪುಸ್ತಕ ಬಿಡುಗಡೆ ಮಾಡಿದರು. (ಎಡದಿಂದ) ಲೇಖಕ ಪ್ರೊ.ಕೆ.ಈ. ರಾಧಾಕೃಷ್ಣ, ಬಿ.ಎಲ್. ಶಂಕರ್, ಜೆಡಿಎಸ್ ಮುಖಂಡ ವೈ.ಎಸ್.ವಿ. ದತ್ತ, ಲೇಖಕ ಎಚ್.ಟಿ. ಪೋತೆ ಮತ್ತು ಲಲಿತ ಕಲಾ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಎಂ.ಎಸ್. ಮೂರ್ತಿ ಇದ್ದರು - ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಭಾರತ–ಪಾಕಿಸ್ತಾನ ಹಾಗೂ ಹಿಂದೂ–ಮುಸ್ಲಿಮರ ಬಗ್ಗೆ ಮಾತನಾಡುವುದು ಈಗ ತಂತಿಯ ಮೇಲಿನ ನಡಿಗೆಯಾಗಿದೆ. ಒಂದೊಂದು ಪದವನ್ನೂ ವಿಮರ್ಶೆ ಮಾಡಿ, ರಾಷ್ಟ್ರ ಭಕ್ತರು ಮತ್ತು ರಾಷ್ಟ್ರದ್ರೋಹಿಗಳೆಂದು ತೀರ್ಮಾನಿಸಲಾಗುತ್ತದೆ’ ಎಂದು ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್ ತಿಳಿಸಿದರು.

ದೇಸಿ ಪುಸ್ತಕವು ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಕೆ.ಈ. ರಾಧಾಕೃಷ್ಣ ಅವರು ಅನುವಾದಿಸಿರುವ ‘ನವಿಲು ಪುರಾಣ’ ಕೃತಿಯನ್ನು (ಮೂಲ ಕೃತಿ ಇಂತಿಜಾರ್ ಹುಸೇನ್ ಅವರ ‘ಎ ಕ್ರಾನಿಕಲ್ ಆಫ್ ದಿ ಪಿಕಾಕ್ಸ್’) ಬಿಡುಗಡೆ ಮಾಡಲಾಯಿತು.

‘ಅಕ್ಷರ ಜ್ಞಾನ ಮತ್ತು ತಿಳಿವಳಿಕೆ ಮಟ್ಟ ಹೆಚ್ಚಿದೆ. ಎಲ್ಲ ವಲಯಗಳಲ್ಲೂ ತಂತ್ರಜ್ಞಾನ ಬಳಕೆಯಾಗುತ್ತಿದೆ. ಈ ಕಾಲಘಟ್ಟದಲ್ಲೂ ಜಾತಿ, ಮತ, ಭೂಮಿ ವಿಚಾರವಾಗಿ ಮನುಷ್ಯರಲ್ಲಿ ಸಂಕುಚಿತ ಮನೋಭಾವ ಹೋಗದಿರುವುದು ದುರಂತ’ ಎಂದರು.

ADVERTISEMENT

ಬಹುಭಾಷಾ ವಿದ್ವಾಂಸ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ‘ವರ್ತಮಾನದ ಅನೇಕ ಪರಿಕರಗಳನ್ನು ಬಳಸಿಯೂ ವರ್ತಮಾನದ ತಲ್ಲಣಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿದ್ದಾಗ ಪುರಾಣ, ಕಾವ್ಯ, ಶಾಸ್ತ್ರಗಳನ್ನು ಓದಿ ಅರ್ಥೈಸಿಕೊಳ್ಳುತ್ತೇವೆ. ಇಂದಿನ ಕಾಲಘಟ್ಟದ ತಲ್ಲಣಗಳನ್ನು ಅರ್ಥಮಾಡಿಕೊಳ್ಳಲು ಗಾಂಧಿ, ರಾಮಕೃಷ್ಣ ಪರಮಹಂಸ, ವಿವೇಕಾನಂದ, ಅಂಬೇಡ್ಕರ್ ಅವರನ್ನು ಮರು ಓದುತ್ತೇವೆ. ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೋಭೆಗಳ ಬೇರೆ ಬೇರೆ ಸಮಸ್ಯೆಗಳನ್ನು ಇಂತಿಜಾರ್ ಹುಸೇನ್ ಅವರು ಕಥನಗಳ ಮೂಲಕ ಸಶಕ್ತವಾಗಿ ಕಟ್ಟಿಕೊಟ್ಟಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.