ಬೆಂಗಳೂರು: ‘ಹೆಣ್ಣಿಗೆ ಲೋಕದ ಬಂಧನ ದಾಟುವುದಕ್ಕಿಂತ ನಮಗೆ ನಾವೇ ಹಾಕಿಕೊಳ್ಳುವ ಬಂಧನ ಮಹಿಳಾ ಲೋಕದ ದೊಡ್ಡ ಸಮಸ್ಯೆ’ ಎಂದು ವಿಮರ್ಶಕಿ ಎಂ.ಎಸ್.ಆಶಾದೇವಿ ಅಭಿಪ್ರಾಯಪಟ್ಟರು.
ಹಾಡ್ಲಹಳ್ಳಿ ಪಬ್ಲಿಕೇಷನ್ ವತಿಯಿಂದ ಚಿತ್ರಕಲಾ ಪರಿಷತ್ ಆವರಣದಲ್ಲಿ ಏರ್ಪಡಿಸಿದ್ದ ದಯಾ ಗಂಗನಘಟ್ಟ ಅವರ ‘ಉಪ್ಪುಚ್ಚಿಮುಳ್ಳು’ ಕಥಾ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆಲವು ತೊಡಕುಗಳನ್ನು ಮೀರುವ ಕೆಲಸವನ್ನು ದಯಾ ಗಂಗನಗಟ್ಟ ಅವರು ತಮ್ಮ ಕಥೆಗಳ ಮೂಲಕ ಮಾಡಿದ್ದಾರೆ. ಹೆಣ್ಣಿನ ದೃಷ್ಟಿಕೋನದಿಂದ ನೋಡಿದ ಕತೆಗಳು ಗೆದ್ದ ಕತೆಗಳಾಗಿವೆ ಎಂದು ಹೇಳಿದರು.
ಸಾಹಿತಿ ಹಾಡ್ಲಹಳ್ಳಿ ನಾಗರಾಜ್ ಮಾತನಾಡಿ, ‘ವಿನಯತೆ ಇಲ್ಲವಾಗಿ, ಉದಯೋನ್ಮುಖ ಎಂಬ ಪರಿಧಿ ಇಲ್ಲದ ಈ ಸಾಹಿತ್ಯ ಕಾಲಘಟ್ಟದಲ್ಲಿ ದಯಾ ಗಂಗನಗಟ್ಟ ಅವರ ಕತೆಗಳು ವಿನಯ ಹಾಗೂ ವಿದೇಯತೆಯ ಜೊತೆಗೆ ನಮ್ಮ ಮುಂದೆ ನಿಲ್ಲುತ್ತವೆ’ ಎಂದು ತಿಳಿಸಿದರು.
‘ಈ ಸಮಯದಲ್ಲಿ ಮಹಿಳಾ ಸಾಹಿತ್ಯ ಮುಂಚೂಣಿಗೆ ಬರುತ್ತಿವೆ. ಅದು ಪ್ರಖರವಾಗಿ ಎಲ್ಲೆಡೆ ಪ್ರಕಟವಾಗುತ್ತಿದೆ. ಧಾವಂತದ ವಾತಾವರಣವನ್ನು ಈಗಿನ ಸ್ಪರ್ಧೆಗಳು ರೂಪಿಸುತ್ತಿವೆ. ಈ ರೀತಿಯ ಧಾವಂತವನ್ನು ದಾಟಬೇಕಾದ ಅನಿವಾರ್ಯತೆ ಈ ಕಾಲದ ಕತೆಗಾರರಿಗೆ ಇದೆ’ ಎಂದು ಹಿರಿಯ ಸಾಹಿತಿ ಕೇಶವ ಮಳಗಿ ಅವರು ಹೇಳಿದರು. ಪ್ರಕಾಶಕ ಚಲಂ ಹಾಡ್ಲಹಳ್ಳಿ, ನಾಟಕಕಾರ ಬೇಲೂರು ರಘುನಂದನ್ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.