ಬೆಂಗಳೂರು: ‘ಜಾಗತಿಕ ಸಾಹಿತ್ಯದ ಬಗ್ಗೆ ತಿಳಿವಳಿಕೆ ಹೆಚ್ಚಾದಂತೆ ನಮ್ಮ ಸಂವೇದನೆ ಕೂಡ ಹೆಚ್ಚು ಶ್ರೀಮಂತವಾಗುತ್ತದೆ. ಆ ದೃಷ್ಟಿಯಿಂದ ಜಗತ್ತಿಗೆ ಕನ್ನಡ ತೆರೆದುಕೊಂಡಿರುವ ಭಾಷೆಯಾಗಿದೆ’ ಎಂದು ಅಮೆರಿಕದ ಸ್ಟೋನಿ ಬ್ರೂಕ್ ವಿಶ್ವವಿದ್ಯಾಲಯದ ಭಾಷಾಶಾಸ್ತ್ರ ಪ್ರಾಧ್ಯಾಪಕ ಎಸ್.ಎನ್. ಶ್ರೀಧರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಬುಕ್ ಬ್ರಹ್ಮ ಸಹಯೋಗದಲ್ಲಿ ಅಂಕಿತ ಪುಸ್ತಕ ಆನ್ಲೈನ್ ವೇದಿಕೆಯಲ್ಲಿ ಶನಿವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕೃಷ್ಣಮೂರ್ತಿ ಹನೂರು ಅವರ ‘ಕಾದಂಬರಿ’, ಡಿ.ಎನ್. ಶ್ರೀನಾಥ್ ಅವರ ‘ಒಂದು ಮಸಾಜ್ ಪಾರ್ಲರ್ ಕಥೆ’ ಹಾಗೂ ಪಾರ್ವತಿ ಐತಾಳ್ ಅವರ ‘ಬೌದಿ’ ಕಾದಂಬರಿ ಬಿಡುಗಡೆ ಮಾಡಿ, ಮಾತನಾಡಿದರು.
‘ವಿಶ್ವದ ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಒಂದು ವಿಶೇಷ ಭಾಷೆ. ಪ್ರಪಂಚದ ಎಲ್ಲ ಮೂಲಗಳಿಂದ ಒಳ್ಳೆಯ ಸಾಹಿತ್ಯ ಕನ್ನಡಕ್ಕೆ ಬರುತ್ತಿದೆ. ಬೇರೆ ಬೇರೆ ದೇಶ, ಭಾಷೆಯ ಕೃತಿಗಳು ಕನ್ನಡಕ್ಕೆ ಅನುವಾದಗೊಳ್ಳುತ್ತಿವೆ. ಇದು ಆರೋಗ್ಯಕರ ಬೆಳವಣಿಗೆ. ಇದರಿಂದ ಕನ್ನಡ ಓದುಗರ ಸಾಂಸ್ಕೃತಿಕ ಪ್ರಪಂಚ ವಿಸ್ತಾರಗೊಳ್ಳುವ ಜತೆಗೆ ಭಾಷೆ ಶ್ರೀಮಂತಗೊಳ್ಳುತ್ತದೆ. ಆದರೆ, ಕನ್ನಡದ ಶ್ರೇಷ್ಠ ಕೃತಿಗಳು ಬೇರೆ ಭಾಷೆಗಳಿಗೆ ಅನುವಾದವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ, ‘ನಮ್ಮ ದೇಶದ ಸಂಪನ್ಮೂಲಗಳನ್ನು ಕೊಂಡೊಯ್ದ ಬ್ರಿಟಿಷರು, ಇಲ್ಲಿನ ಸಂಪದ್ಭರಿತ ಸಾಹಿತ್ಯ ಕೃತಿಗಳನ್ನು ಹೊತ್ತೊಯ್ಯದಿರುವುದು ಆಶ್ಚರ್ಯವನ್ನುಂಟು ಮಾಡುತ್ತದೆ. ಒಂದು ವೇಳೆ ಸಾಹಿತ್ಯ ಕೃತಿಗಳನ್ನು ಹೊತ್ತೊಯ್ದಿದ್ದರೆ ಷೇಕ್ಸ್ಪಿಯರ್ಗಿಂತ ಇಲ್ಲಿನ ಕುಮಾರವ್ಯಾಸ ಹೆಚ್ಚು ಪ್ರಸಿದ್ಧಿಯಾಗುತ್ತಿದ್ದ’ ಎಂದು ಹೇಳಿದರು.
ಲೇಖಕಿ ಡಾ ಗೀತಾ ಶೆಣೈ ಅವರು ಕೃತಿಗಳ ಬಗ್ಗೆ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.