ಬೆಂಗಳೂರು: 'ಕೊರೊನಾ ಇರುವುದರಿಂದ ಈ ವರ್ಷದಲ್ಲಿ ಬೆಂಗಳೂರು ನಗರ ಸಾರಿಗೆ ಕ್ಷೇತ್ರದಲ್ಲಿ ನಡೆಯಬೇಕಿದ್ದ ಅಭಿವೃದ್ಧಿ ಯೋಜನೆಗಳು ನಿಧಾನವಾಗಿ ಸಾಗಿವೆ. ಇದರಿಂದ ನಗರದಲ್ಲಿ ಕೊನೆ ಮೈಲಿ ಸಾರಿಗೆ ಸಂಪರ್ಕದ ಯಶಸ್ವಿ ಕೊಂಚ ವಿಳಂಬವಾಗಿದೆ' ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ತಿಳಿಸಿದರು.
ಬಿ-ಪ್ಯಾಕ್ ಸಂಸ್ಥೆಯು 'ಬಸ್ಗಳನ್ನು ಉತ್ತಮವಾಗಿ ಬಳಸಿಕೊಳ್ಳುವುದು' ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಆನ್ಲೈನ್ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
'ಕೊರೊನಾ ಸಂದರ್ಭದಲ್ಲೂ ಬಿಎಂಟಿಸಿ ಬಸ್ಗಳನ್ನು ಪ್ರಾಥಮಿಕ ಸಾರಿಗೆಯನ್ನಾಗಿ ಪ್ರಯಾಣಿಕರು ಸ್ವೀಕರಿಸಿದ್ದಾರೆ. ಆದರೆ, ಪ್ರಯಾಣಿಕರ ಕೊರತೆಯಿಂದ ಬಸ್ಗಳ ನಿರ್ವಹಣೆ ಕಷ್ಟವಾಗಿದೆ. ಪ್ರಸ್ತುತ ಸಂಸ್ಥೆಯ ಸಿಬ್ಬಂದಿಗೆ ಸರ್ಕಾರವೇ ವೇತನ ನೀಡುತ್ತಿದ್ದು, ಮುಂದಿನ 2–3 ತಿಂಗಳವರೆಗೆ ಸಂಸ್ಥೆಯ ಪರ ಸರ್ಕಾರ ನಿಲ್ಲಲಿದೆ' ಎಂದರು.
'ಏಕೀಕೃತ ಕಾರ್ಡ್ ಬಳಸುವ ಮೂಲಕ ಮೆಟ್ರೊ ಹಾಗೂ ಬಿಎಂಟಿಸಿ ಸಾರಿಗೆ ಬಳಸುವ ವ್ಯವಸ್ಥೆ ಈಗಾಗಲೇ ಬರಬೇಕಿತ್ತು. ನಗರದ 12 ದಟ್ಟಣೆಯ ಕಾರಿಡಾರ್ ಗಳಲ್ಲಿ ಪ್ರತ್ಯೇಕ ಪಥ ನಿರ್ಮಾಣದ ಗುರಿಯೂ ಕೊರೊನಾದಿಂದ ಕುಂಟುತ್ತಿದೆ‘ ಎಂದರು.
ಬಿ-ಪ್ಯಾಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೇವತಿ ಅಶೋಕ್,' ಸಾರ್ವಜನಿಕ ಸಾರಿಗೆ ಬಳಕೆ ವಿಚಾರದಲ್ಲಿ ಶೇ 80ರಷ್ಟಿರುವ ಮುಂಬೈಗೆ ಹೋಲಿಸಿದರೆ ಬೆಂಗಳೂರು ಕೇವಲ ಶೇ 48ರಷ್ಟು ಸಾಧಿಸಿದೆ. 2030ಕ್ಕೆ ನಗರದ ಸಾರ್ವಜನಿಕರ ಸಾರಿಗೆ ಪ್ರಮಾಣ ಶೇ 80ಕ್ಕೆ ದಾಟುವ ಗುರಿ ಇದೆ' ಎಂದರು.
'ಬಿಎಂಟಿಸಿ ಲಾಭದ ಉದ್ದೇಶವನ್ನು ಬದಿಗಿಟ್ಟು, ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೇವೆ ಒದಗಿಸುವುದಕ್ಕೆ ಆದ್ಯತೆ ನೀಡಬೇಕು' ಎಂದು ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆಯ ಸಹ ಸಂಸ್ಥಾಪಕಿ ಶಾಹೀನ್ ಶಾಸ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.