ADVERTISEMENT

ವೃಂದಾವನ ಧ್ವಂಸ: ಪ್ರತಿಭಟನಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 19:38 IST
Last Updated 20 ಜುಲೈ 2019, 19:38 IST
ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತರು
ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತರು   

ಬೆಂಗಳೂರು: ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿರುವ ವ್ಯಾಸರಾಯರ ವೃಂದಾವನವನ್ನು ದುಷ್ಕರ್ಮಿಗಳು ಧ್ವಂಸ ಮಾಡಿರುವುದನ್ನು ಖಂಡಿಸಿ ‘ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ಎನ್‌ಕೆಬಿಎಂಎಸ್)’ ನೇತೃತ್ವದಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಬೆಣ್ಣೆ ಗೋವಿಂದಪ್ಪ ಮಠದಿಂದ ಆರಂಭವಾದ ಮೆರವಣಿಗೆ ವಾಣಿ ವಿಲಾಸ್ ರಸ್ತೆಯ ಮೂಲಕ ಸಾಗಿ ಗಾಂಧಿ ಬಜಾರ್ ವೃತ್ತದಲ್ಲಿರುವ ವ್ಯಾಸರಾಯರ ಮಠದಲ್ಲಿ ಸಮಾಪ್ತಗೊಂಡಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಮಧ್ವ ಯುವ ಪರಿಷತ್,ವ್ಯಾಸರಾಜ ಯುವ ವೇದಿಕೆ, ಅಖಿಲ ಕರ್ನಾಟಕ ಮಾಧ್ವ ಮಹಾಸಭಾ, ಮುಖ್ಯಪ್ರಾಣ ಮಂದಿರ ಹಾಗೂ ಚಾಮರಾಜಪೇಟೆ ಮಾಧ್ವ ಸಂಘದ ಸಹಯೋಗದಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ADVERTISEMENT

ಮೆರವಣಿಗೆ ನಂತರ ವ್ಯಾಸರಾಯರ ಮಠದ ಆವರಣದಲ್ಲಿ ಬಹಿರಂಗ ಸಭೆ ನಡೆಸಿದ ಸಮಾಜದ ಮುಖಂಡರು, ‘ವೃಂದಾವನ ಧ್ವಂಸಗೊಳಿಸಿದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

‘ವ್ಯಾಸರಾಯರ ವೃಂದಾವನವನ್ನು ಧ್ವಂಸ ಮಾಡಿರುವುದು ನಮಗೆಲ್ಲ ನೋವುಂಟು ಮಾಡಿದೆ. ಈ ಕೃತ್ಯವನ್ನು ನಾವೆಲ್ಲರೂ ಖಂಡಿಸುತ್ತೇವೆ’ ಎಂದರು.

‘ಇಂಥ ಘಟನೆಗಳು ಮರುಕಳಿಸದಂತೆ ವೃಂದಾವನ ಹಾಗೂ ಸುತ್ತಮುತ್ತ ಬಿಗಿ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಭದ್ರತೆ ಸಂಬಂಧ ಯಾವುದೇ ನಿರ್ಧಾರ ಕೈಗೊಂಡರೂ ರಾಜ್ಯ ಸರ್ಕಾರದ ಜೊತೆ ನಾವೆಲ್ಲರೂ ಇರುತ್ತೇವೆ’ ಎಂದು ಮುಖಂಡರು ಹೇಳಿದರು.

ಎನ್‌ಕೆಬಿಎಂಎಸ್ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ್, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ತೋ.ಚ. ಅನಂತ ಸುಬ್ಬರಾವ್, ಮಾಧ್ವ ಮಹಾಸಭಾ ಅಧ್ಯಕ್ಷ ರಾಮಕೃಷ್ಣ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.