ಬೆಂಗಳೂರು: ಹೋಟೆಲ್ ಉದ್ಯಮ ಪ್ರಾರಂಭಿಸಲು ಪರವಾನಗಿ ನೀಡಲು ₹ 3,500 ಲಂಚ ಪಡೆದ ಆರೋಪದ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತಾಧಿಕಾರಿ ಡಾ.ಹರ್ಷವರ್ಧನ್ ಮತ್ತು ಹರೀಶ್ ಪೊನ್ನಪ್ಪ ಎಂಬ ಖಾಸಗಿ ವ್ಯಕ್ತಿಯನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸೋಮವಾರ ಬಂಧಿಸಿದೆ.
ದೇವನಹಳ್ಳಿಯ ನಿವಾಸಿಯೊಬ್ಬರು ಜಾಲ ಹೋಬಳಿಯ ಬೇಗೂರು ಗ್ರಾಮದಲ್ಲಿ ಹೋಟೆಲ್ ಆರಂಭಿಸಲು ಪರವಾನಗಿ ಕೋರಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ₹ 2,000 ಶುಲ್ಕದ ಜತೆ ₹ 3,500 ಲಂಚ ಸೇರಿಸಿ ಕೊಡುವಂತೆ ಅಂಕಿತಾಧಿಕಾರಿ ಬೇಡಿಕೆ ಇಟ್ಟಿದ್ದರು. ಈ ಕುರಿತು ಅರ್ಜಿದಾರರು ಎಸಿಬಿ ಬೆಂಗಳೂರು ನಗರ ಘಟಕಕ್ಕೆ ದೂರು ನೀಡಿದ್ದರು.
‘ಅರ್ಜಿದಾರರು ಸೋಮವಾರ ಡಾ.ಹರ್ಷವರ್ಧನ್ ಅವರನ್ನು ಭೇಟಿಮಾಡಿದಾಗ ಹರೀಶ್ ಪೊನ್ನಪ್ಪ ಬಳಿ ಹಣ ನೀಡುವಂತೆ ಸೂಚಿಸಿದ್ದರು. ಅದರಂತೆ ಅರ್ಜಿದಾರರು ಹಣ ತಲುಪಿಸಿದ್ದರು. ತಕ್ಷಣ ದಾಳಿಮಾಡಿ ಇಬ್ಬರನ್ನೂ ಬಂಧಿಸಲಾಯಿತು’ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.