ADVERTISEMENT

BESCOM | ವಿದ್ಯುತ್ ಸಂಪರ್ಕಕ್ಕೆ ₹3.5 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದ ಎಇಇ ಬಂಧನ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2023, 13:53 IST
Last Updated 16 ಆಗಸ್ಟ್ 2023, 13:53 IST
ಬೆಸ್ಕಾಂ ಎಸ್‌–1 ಜಯನಗರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಧನಂಜಯ ವಿ.
ಬೆಸ್ಕಾಂ ಎಸ್‌–1 ಜಯನಗರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಧನಂಜಯ ವಿ.   

ಬೆಂಗಳೂರು: ಕಟ್ಟಡವೊಂದಕ್ಕೆ 23 ಕಿಲೋವಾಟ್‌ ಸಾಮರ್ಥ್ಯದ ವಿದ್ಯುತ್‌ ಸಂಪರ್ಕಕ್ಕೆ ಮಂಜೂರಾತಿ ನೀಡಲು ₹ 3.5 ಲಕ್ಷ ಲಂಚ ಪಡೆಯುತ್ತಿದ್ದ ಬೆಸ್ಕಾಂ ಎಸ್‌–1 ಜಯನಗರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಧನಂಜಯ ವಿ. ಮತ್ತು ಅವರ ಪರವಾಗಿ ಹಣ ಪಡೆದ ಸೈಯದ್‌ ನಿಜಾಮ್‌ ಎಂಬ ಖಾಸಗಿ ವ್ಯಕ್ತಿಯನ್ನು ಲೋಕಾಯುಕ್ತ ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದಾರೆ.

ಕಟ್ಟಡವೊಂದಕ್ಕೆ 23 ಕೆವಿ ಸಾಮರ್ಥ್ಯದ ವಿದ್ಯುತ್‌ ಸಂಪರ್ಕ ಕೋರಿ ಭರತ್‌ ಕುಮಾರ್‌ ಎನ್‌.ಎಂ. ಎಂಬ ಎಲೆಕ್ಟ್ರಿಕ್‌ ಕಾಮಗಾರಿಗಳ ಗುತ್ತಿಗೆದಾರ ಬೆಸ್ಕಾಂನ ಜಯನಗರ ಉಪ ವಿಭಾಗ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಮಂಜೂರಾತಿ ನೀಡಲು ₹ 13 ಲಕ್ಷ ಲಂಚ ನೀಡುವಂತೆ ಧನಂಜಯ ಬೇಡಿಕೆ ಇಟ್ಟಿದ್ದರು. ₹ 3.5 ಲಕ್ಷವನ್ನು ಬುಧವಾರವೇ ತಲಪಿಸುವಂತೆ ಅರ್ಜಿದಾರರಿಗೆ ಸೂಚಿಸಿದ್ದರು.

ಈ ಕುರಿತು ಭರತ್‌ ಕುಮಾರ್‌ ಲೋಕಾಯುಕ್ತದ ಬೆಂಗಳೂರು ನಗರ ಘಟಕದ ಪೊಲೀಸರಿಗೆ ದೂರು ನೀಡಿದ್ದರು. ಬೆಸ್ಕಾಂನ ಜಯನಗರ ಉಪ ವಿಭಾಗದ ಕಚೇರಿಯಲ್ಲಿ ದೂರುದಾರರು ಲಂಚದ ಹಣದೊಂದಿಗೆ ಧನಂಜಯ ಅವರನ್ನು ಬುಧವಾರ ಸಂಜೆ 4 ಗಂಟೆಗೆ ಭೇಟಿಮಾಡಿದ್ದರು. ಲಂಚದ ಹಣವನ್ನು ಅಲ್ಲಿಯೇ ಇದ್ದ ಸೈಯದ್ ನಿಜಾಮ್‌ ಅವರಿಗೆ ತಲುಪಿಸುವಂತೆ ಅಧಿಕಾರಿ ಸೂಚಿಸಿದರು. ಅದರಂತೆಯೇ ಭರತ್‌ ಕುಮಾರ್‌ ಹಣವನ್ನು ನೀಡಿದರು. ತಕ್ಷಣ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಧನಂಜಯ ಮತ್ತು ಸೈಯದ್ ನಿಜಾಮ್‌ ಇಬ್ಬರನ್ನೂ ಬಂಧಿಸಿದರು ಎಂದು ಲೋಕಾಯುಕ್ತ ಪೊಲೀಸ್‌ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಲೋಕಾಯುಕ್ತದ ಬೆಂಗಳೂರು ನಗರ ಘಟಕದ ಎಸ್‌ಪಿ ಕೆ.ವಿ. ಅಶೋಕ್‌ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಾದ ವೆಂಕಟೇಶ್‌ ಕೆ., ವಿಜಯಕೃಷ್ಣ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.