ADVERTISEMENT

ಕೇಬಲ್‌ನಲ್ಲಿ ವಿದ್ಯುತ್‌ ಹರಿದು ಅಣ್ಣ–ತಂಗಿಗೆ ತೀವ್ರ ಗಾಯ

* ಕೊಡಿಗೇಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಘಟನೆ * ತುಂಡಾದ ಕೈ ಬೆರಳು

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 20:15 IST
Last Updated 10 ಡಿಸೆಂಬರ್ 2019, 20:15 IST
   

ಬೆಂಗಳೂರು: ತಿಂಡ್ಲು ಬಳಿಯ ಧನಲಕ್ಷ್ಮಿ ಬಡಾವಣೆಯ ಮನೆಯೊಂದರಲ್ಲಿ ಟಿ.ವಿ.ಗೆ ಸಂಪರ್ಕ ನೀಡಿದ್ದ ಕೇಬಲ್‌ನಲ್ಲಿ ವಿದ್ಯುತ್‌ ಹರಿದು ನಾಗಭೂಷಣ ಹಾಗೂ ಅವರ ತಂಗಿ ಮಾನಸ ಎಂಬುವರು ತೀವ್ರವಾಗಿ ಗಾಯಗೊಂಡಿದ್ದು, ಅವರಿಬ್ಬರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಹಾಥ್‌ವೇ ಕೇಬಲ್‌ ಸಂಸ್ಥೆಯ ನಿರ್ಲಕ್ಷ್ಯವೇ ಈ ಅವಘಡಕ್ಕೆ ಕಾರಣವೆಂದು ನಾಗಭೂಷಣ ದೂರಿದ್ದಾರೆ. ಆಸ್ತಿಗೆ ನಷ್ಟ ಉಂಟು ಮಾಡಿದ (ಐಪಿಸಿ 427) ಹಾಗೂ ನಿರ್ಲಕ್ಷ್ಯ (ಐಪಿಸಿ 338) ಆರೋಪದಡಿ ಆ ಸಂಸ್ಥೆ ವಿರುದ್ಧ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ವಿದ್ಯುತ್ ತಂತಿಗೆ ಹೊಂದಿಕೊಂಡೇ ಕೇಬಲ್ ಎಳೆದು ಟಿ.ವಿ.ಗೆ ಸಂಪರ್ಕ ನೀಡಲಾಗಿತ್ತು. ಭಾನುವಾರ (ಡಿ. 8) ಬೆಳಿಗ್ಗೆ ಕೇಬಲ್‌ನಲ್ಲಿ ವಿದ್ಯುತ್‌ ಹರಿದು ಶಾರ್ಟ್ ಸರ್ಕೀಟ್ ಉಂಟಾಗಿತ್ತು. ಟಿ.ವಿ ಹಾಗೂ ಫ್ರಿಡ್ಜ್ ಸುಟ್ಟು ಹೋಗಿತ್ತು. ಗಾಬರಿಗೊಂಡ ನಾಗಭೂಷಣ, ಮನೆಯ ಎಲ್ಲ ವಿದ್ಯುತ್ ಸಂಪರ್ಕಗಳನ್ನು ಕಡಿತಗೊಳಿಸಿದ್ದರು.’

ADVERTISEMENT

‘ಟಿ.ವಿ.ಗೆ ಅಳವಡಿಸಿದ್ದ ಕೇಬಲ್‌ ತೆಗೆಯಲು ಹೋಗಿದ್ದಾಗ ನಾಗಭೂಷಣ ಅವರಿಗೆ ವಿದ್ಯುತ್ ತಗುಲಿತ್ತು. ರಕ್ಷಣೆಗೆ ಹೋದ ಅವರ ತಂಗಿಯೂ ವಿದ್ಯುದಾಘಾತಕ್ಕೆ ಒಳಗಾದರು’ ಎಂದು ಹೇಳಿದರು.

ತುಂಡಾದ ಕೈ ಬೆರಳು

‘ಅವಘಡದಿಂದ ನಾಗಭೂಷಣ ಅವರ ಬಲಗೈ ಕಿರುಬೆರಳು ತುಂಡಾಗಿದೆ. ಕಾಲು, ಭುಜ ಹಾಗೂ ಹೊಟ್ಟೆಗೂ ಗಾಯಗಳಾಗಿವೆ. ಮಾನಸ ಅವರ ಎರಡೂ ಕೈ, ಹೊಟ್ಟೆ ಹಾಗೂ ಬಲಕಾಲಿನಲ್ಲಿ ಸುಟ್ಟ ಗಾಯಗಳಾಗಿವೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.