ಬೆಂಗಳೂರು: ಕೋವಿಡ್ ಹೆಸರೆತ್ತಲು ಜನ ಭೀತಿ ಪಡುತ್ತಿದ್ದರೆ ಅಂತಹವರ ಸ್ವ್ಯಾಬ್ ತೆಗೆದು, ಇಂಜೆಕ್ಷನ್ ಕೊಟ್ಟು, ವೆಂಟಿಲೇಟರ್ ಹಾಕುವ ಕೆಲಸದಲ್ಲಿ ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಜೀವ ಕಾಪಾಡಿದವರು ಆರೋಗ್ಯ ಸಿಬ್ಬಂದಿ ಗಳಾದ ವೈದ್ಯರು, ನರ್ಸ್ಗಳು. ಅವರ ಜತೆ ಜತೆಗೆ ದುಡಿದವರು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು.
ಸದಾ ಸೋಂಕಿತರ ಆರೈಕೆಯಲ್ಲಿ ಇರುವ ಕಾರಣ ಈ ಸಿಬ್ಬಂದಿಯೊಂದಿಗೆ ಬೆರೆಯಲು ಜನ ಭಯಪಡುತ್ತಿದ್ದಾರೆ. ಅಂಥವರ ಜತೆ ವಿಡಿಯೊ ಸಂವಾದ ನಡೆಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ನಿಮ್ಮೊಂದಿಗೆ ಸರ್ಕಾರ ಇದೆ ಎಂಬ ಧೈರ್ಯ ತುಂಬಿದ್ದಾರೆ.
ಕೋವಿಡ್ ಆರಂಭ ಆದಾಗಿನಿಂದ ನಿರಂತರವಾಗಿ ದಣಿದಿದ್ದ ವೈದ್ಯಕೀಯ ಸಿಬ್ಬಂದಿಯನ್ನು ತಾವೇ ಮಾತನಾಡಿಸಿ ಅವರ ಹೃದಯ ಮುಟ್ಟುವ ಕೆಲಸವನ್ನು ಮುಖ್ಯಮಂತ್ರಿ ಮಾಡಿದರು.
ಅಪಾಯವನ್ನೂ ಲೆಕ್ಕಿಸದೆ ಸೋಂಕಿತರ ಶುಶ್ರೂಷೆಯಲ್ಲಿ ನಿರತರಾದ ವರನ್ನು ನಗುಮುಖದೊಂದಿಗೆ ಮಾತನಾಡಿಸಿ ಅವರ ಕಷ್ಟ, ಕಾರ್ಪಣ್ಯ ಗಳನ್ನು ಮುಕ್ತ ಮನಸಿಸಿನಿಂದ ಆಲಿಸಿದರು. ಅಷ್ಟೇ ಅಲ್ಲದೇ, ‘ನಿಮ್ಮ ಸುರಕ್ಷತೆಗೆ ವಹಿಸಿರುವ ಎಚ್ಚರಿಕೆ ಏನು‘ ಎಂದು ಕೇಳಿ ತಿಳಿದುಕೊಂಡರು. ‘ಲಸಿಕೆ ಪಡೆದಿದ್ದೀರಾ, ನಿಮ್ಮ ಪ್ರಾಣವೂ ನಮಗೆ ಮುಖ್ಯ’ ಎಂದು ಹೇಳುವ ಮೂಲಕ ಅವರಲ್ಲಿ ಚೈತನ್ಯ ತುಂಬಿದರು.
‘ಸದಾ ಕೋವಿಡ್ ರೋಗಿಗಳ ಜೊತೆಯೇ ಇದ್ದು ಆರೈಕೆ ಮಾಡಿದ್ದೀರಿ. ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ರಾಜ್ಯದ ಅಮೂಲ್ಯ ಆಸ್ತಿ. ನಿಮ್ಮ ಕರ್ತವ್ಯ ಅನುಕರಣೀಯ’ ಎಂದು ಬಣ್ಣಿಸಿ ಅವರಲ್ಲಿ ಹೊಸ ಹುರುಪು ತುಂಬುವ ಕೆಲಸ ಮಾಡಿದರು.
ಸೇವೆ ಸಂದರ್ಭದಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸಂವಾದ ವೇಳೆ ನೇರವಾಗಿ ಪ್ರಶ್ನಿಸಿದ ಮುಖ್ಯಮಂತ್ರಿ, ‘ಕೋವಿಡ್ ಸಂದರ್ಭ ತಂದೊಡ್ಡಿರುವ ಸವಾಲುಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ಸಮರ್ಥವಾಗಿ ಎದುರಿಸಬೇಕಿದೆ. ಲಭ್ಯವಿರುವ ಸೌಲಭ್ಯಗಳನ್ನು ಪ್ರಾಮಾಣಿಕ ವಾಗಿ, ಪಾರದರ್ಶಕತೆಯಿಂದ ಬಳಸುವ ಅಗತ್ಯವಿದೆ’ ಎಂದು ಅವರಲ್ಲಿ ಕರ್ತವ್ಯದ ಜವಾಬ್ದಾರಿಯನ್ನೂ ಹೆಚ್ಚಿಸಿದರು.
ಬಾಕ್ಸ್
ಮನೆಗೆ ಬನ್ನಿ ಎಂದು ಆಮಂತ್ರಣ ಕೊಟ್ಟ ಯಡಿಯೂರಪ್ಪ
ಅಂಗನವಾಡಿ ಕಾರ್ಯಕರ್ತೆಯಾದ ಬೆಳಗಾವಿ ಜಿಲ್ಲೆ ಬೈಲಹೊಂಗಲದ ಮಂಜುಳಾ ಸಂಗಮೇಶ್ ಅವರನ್ನು ‘ಬೆಂಗಳೂರಿಗೆ ಬಂದಾಗ ಮನೆಗೆ ಬಂದು ಆತಿಥ್ಯ ಸ್ವೀಕರಿಸಿ’ ಎಂದು ಕರೆಯುವ ಮೂಲಕ ಯಡಿಯೂರಪ್ಪ ತಾಯಿ ಹೃದಯ ಮೆರೆದರು.
‘ಕುಟುಂಬದ ಎಲ್ಲಾ ನಾಲ್ವರಿಗೂ ಕೋವಿಡ್ ಸೋಂಕು ತಗುಲಿತ್ತು. ನಾಲ್ವರೂ ಚಿಕಿತ್ಸೆ ಪಡೆದೆವು. ಅತ್ತೆ ಸೇರಿ ಮೂವರೂ ಹುಷಾರಾಗಿ ಮನೆಗೆ ಬಂದೆವು. ಆದರೆ ಪತಿ ಸಾವಿಗೀಡಾದರು’ ಎಂದು ಗಿರಿಜಾ ಅವರು ಹೇಳಿದಾಗ ಮುಖ್ಯಮಂತ್ರಿ ಅವರ ಕಣ್ಣಾಲಿ ಒದ್ದೆಯಾದವು. ಬಳಿಕ, ಮಂಜುಳಾ ಅವರಿಗೆ ಸಾಂತ್ವನ ಹೇಳಿದ ಮುಖ್ಯಮಂತ್ರಿ ಅವರಿಗೆ ಧೈರ್ಯ ತುಂಬಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.