ADVERTISEMENT

ನೈತಿಕತೆ ಇದ್ದರೆ ರಾಜೀನಾಮೆ ನೀಡಿ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 21 ಜುಲೈ 2019, 19:37 IST
Last Updated 21 ಜುಲೈ 2019, 19:37 IST
ಬಿ.ಎಸ್‌.ಯಡಿಯೂರಪ್ಪ
ಬಿ.ಎಸ್‌.ಯಡಿಯೂರಪ್ಪ   

ಬೆಂಗಳೂರು: ‘ನೈತಿಕತೆ ಇದ್ದರೆ ಬಹುಮತ ಕಳೆದುಕೊಂಡಿರುವ ನೀವು ಮೊದಲು ರಾಜೀನಾಮೆ ಕೊಟ್ಟು ಪ್ರಜಾಪ್ರಭುತ್ವದ ಮೌಲ್ಯ ಎತ್ತಿ ಹಿಡಿಯುವುದು ಒಳ್ಳೆಯದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪತ್ರಕ್ಕೆ ತಿರುಗೇಟು ನೀಡಿರುವ ಯಡಿಯೂರಪ್ಪ,‘ಕುರ್ಚಿ ಕಳೆದು
ಕೊಳ್ಳುವುದು ಖಾತ್ರಿ ಆಗಿರುವಾಗ ಅವರಿಗೆ ನೈತಿಕತೆ ನೆನಪಾಗಿದೆ ಎಂದು ಹೇಳಿದ್ದಾರೆ.

‘ಚುನಾವಣೆ ಪೂರ್ವದಲ್ಲಿ ಪರಸ್ಪರ ಕಚ್ಚಾಡಿ, ಒಬ್ಬರಿಗೊಬ್ಬರು ಬಾಯಿಗೆ ಬಂದ ಹಾಗೆ ಮಾತನಾಡಿ, ಆಮೇಲೆ ಅಧಿಕಾರ ದಾಹದಿಂದ ಕಾಂಗ್ರೆಸ್‌ ಜತೆ ಸೇರಿ ಸರ್ಕಾರ ರಚಿಸುವಾಗ ನೈತಿಕತೆ ಎಲ್ಲಿತ್ತು’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

‘ರಾಜ್ಯ ರಾಜಕೀಯದಲ್ಲಿ ಕುತಂತ್ರದಿಂದ ಮತ್ತು ಹಣದ ಬಲದಿಂದ ಸರ್ಕಾರವನ್ನು ಅಸ್ಥಿರಗೊಳಿಸಿ, ಪ್ರಜಾಪ್ರಭುತ್ವ ಬುಡ ಮೇಲು ಮಾಡಿದ ಪಿತಾಮಹ ನಿಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ಮಾಜಿ ಪ್ರಧಾನಿ ದೇವೇಗೌಡ ಎಂಬುದು ಜಗತ್ತಿಗೇ ಗೊತ್ತು’.

‘1994 ರಲ್ಲಿ ದೇವೇಗೌಡರಿಗೆ ರಾಜಕೀಯ ಮರುಜನ್ಮ ನೀಡಿದ ರಾಮಕೃಷ್ಣ ಹೆಗಡೆಯವರನ್ನು ಚಪ್ಪಲಿಯಿಂದ ಹೊಡೆಸಿ ವಾಮ ಮಾರ್ಗ
ದಿಂದ ಅಧಿಕಾರ ಪಡೆದುಕೊಂಡಿದ್ದು ಪ್ರಜಾಪ್ರಭುತ್ವದ ಅಣಕವಲ್ಲವೇ’ ಎಂದು ಯಡಿಯೂರಪ್ಪ ಹೇಳಿದ್ದಾರೆ.

‘ನಾನು ಮುಖ್ಯಮಂತ್ರಿ ಆಗಿದ್ದಾಗ ಗಣಿ ಮಾಲೀಕರಿಂದ ಹಣ ಕೊಡಿಸಿ19 ಶಾಸಕರನ್ನು ರಾಜಭವನಕ್ಕೆ ಕಳಿಸಿ ಅಲ್ಲಿಂದ ಗೋವಾ ರೆಸಾರ್ಟ್‌ನಲ್ಲಿ ಇರಿಸಿದಿರಿ. ಬಳಿಕ ಅವರ ಜತೆ ಬಹಿರಂಗವಾಗಿ ಗುರುತಿಸಿಕೊಂಡಿದ್ದು ನೈತಿಕತೆಯೇ, ಕಾನೂನು ಬಾಹಿರವಾಗಿ ಅಧಿಕಾರ ಹಿಡಿಯಲು ಪ್ರಯತ್ನ ಮಾಡಿದ್ದನ್ನು ಮರೆತಿದ್ದೀರಾ’ ಎಂದರು. ‘ಸದನದಲ್ಲಿ ಸಮಯಕಳೆಯುತ್ತಿರುವುದನ್ನು ನೋಡಿದಾಗ ನೀವು ಕುರ್ಚಿಗೆ ಎಷ್ಟರ ಮಟ್ಟಿಗೆ ಅಂಟಿಕೊಂಡಿದ್ದೀರಾ ಎಂಬುದು ಜಗಜ್ಜಾಹೀರಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.