ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಪ್ರಸಕ್ತ ಸಾಲಿನ ಬಜೆಟ್ ಬಡವರ ವಿರೋಧಿಯಾಗಿದೆ. ಗುತ್ತಿಗೆದಾರರ ಕಿಸೆ ತುಂಬಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ’ ಎಂದು ವಿವಿಧ ರಾಜಕೀಯ ಪಕ್ಷಗಳು ಮುಖಂಡರು ಅಭಿಪ್ರಾಯಪಟ್ಟರು.
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಳೆ) ಶನಿವಾರ ಆಯೋಜಿಸಿದ್ದ ‘ಬೆಂಗಳೂರಿಗರ ನಿರೀಕ್ಷೆಗಳು ಮತ್ತು ಬಿಬಿಎಂಪಿ ಬಜೆಟ್ ಭರವಸೆಗಳು’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.
‘ಬೆಂಗಳೂರು ಬಡವರ ನಗರ. ಸುಮಾರು 700 ಕೊಳೆಗೇರಿಗಳಲ್ಲಿ ಲಕ್ಷಾಂತರ ಮಂದಿ ವಾಸಿಸುತ್ತಿದ್ದಾರೆ. ವಲಸೆ, ಕಟ್ಟಡ ಹಾಗೂ ಪೌರ ಕಾರ್ಮಿಕರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರನ್ನು ಕಡೆಗಣಿಸಲಾಗಿದೆ. ಬೆಂಗಳೂರಿನ ಜೀವನಾಡಿಗಳಾಗಿರುವ ಕೆರೆಗಳು ಹಾಗೂ ರಾಜಕಾಲುವೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿಲ್ಲ’ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ ಹೇಳಿದರು.
‘ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಒದಗಿಸಿರುವುದು, ವಿಕೇಂದ್ರೀಕರಣಕ್ಕೆ ಒತ್ತು ನೀಡಿರುವುದು, ಅತಿ ಹೆಚ್ಚು ಅಂಕ ಗಳಿಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡ ವಿದ್ಯಾರ್ಥಿಗಳಿಗೆ ₹25 ಸಾವಿರ ಹಾಗೂ ಉತ್ತಮ ಶಿಕ್ಷಕರಿಗೆ ₹2 ಲಕ್ಷ ಪ್ರೋತ್ಸಾಹ ಧನ ಪ್ರಕಟಿಸಿರುವುದೂ ಸ್ವಾಗತಾರ್ಹ’ ಎಂದರು.
ಮಕ್ಕಳ ಹಕ್ಕುಗಳ ಆಯೋಗದ ಮಾಜಿ ಅಧ್ಯಕ್ಷ ವೈ.ಮರಿಸ್ವಾಮಿ ‘ಬಿಬಿಎಂಪಿ ವ್ಯಾಪ್ತಿಯ ಶಾಲಾ ಮತ್ತು ಕಾಲೇಜುಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಿತ್ತು. ಈ ವಿಚಾರದಲ್ಲಿ ದೆಹಲಿ ಸರ್ಕಾರವು ನಮಗೆ ಮಾದರಿಯಾಗಬೇಕು. ಅರವಿಂದ ಕೇಜ್ರಿವಾಲ್ ಸರ್ಕಾರವು ಸರ್ಕಾರಿ ಶಾಲೆಗಳಿಗೆ ಹೈಟೆಕ್ ಸ್ಪರ್ಶ ನೀಡಿದೆ. ಮಕ್ಕಳ ಭಿಕ್ಷಾಟನೆ ತಪ್ಪಿಸಲು ಬಜೆಟ್ನಲ್ಲಿ ಯಾವ ಪರಿಹಾರವನ್ನೂ ಪ್ರಕಟಿಸಿಲ್ಲ’ ಎಂದು ಹೇಳಿದರು.
ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಅಬ್ದುಲ್ ವಾಜಿದ್ ‘ಜನಪ್ರತಿನಿಧಿಗಳಿದ್ದ ಸಮಯದಲ್ಲಿ ಬಜೆಟ್ ಕುರಿತು ಕೌನ್ಸಿಲ್ನಲ್ಲಿ ಸುದೀರ್ಘ ಚರ್ಚೆ ನಡೆಯುತ್ತಿತ್ತು. ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ನೀಡಬೇಕು, ಯಾವುದಕ್ಕೆ ನೀಡಬಾರದು ಎಂಬುದರ ಬಗ್ಗೆ ಎಲ್ಲಾ ಸದಸ್ಯರ ಅಭಿಪ್ರಾಯ ಕೇಳಲಾಗುತ್ತಿತ್ತು. ಆದರೆ ಈಗ ಯಾರ ಜೊತೆಯೂ ಚರ್ಚಿಸದೇ ನೇರವಾಗಿ ಬಜೆಟ್ ಮಂಡಿಸಲಾಗಿದೆ’ ಎಂದು ನುಡಿದರು.
ಬಿಜೆಪಿ ಮುಖಂಡ ನಾರಾಯಣಸ್ವಾಮಿ ‘ಈ ಸಲದ ಬಜೆಟ್ನಲ್ಲಿ ವಿಕೇಂದ್ರೀಕರಣಕ್ಕೆ ಒತ್ತು ನೀಡಿರುವುದರಿಂದ ಅಭಿವೃದ್ಧಿ ಕೆಲಸಗಳು ಸುಲಲಿತವಾಗಿ ನಡೆಯಲಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.