ADVERTISEMENT

ಬೆಂಗಳೂರು: ಮುತ್ತು ಕೇಳಿದ ಚಾಲಕನಿಗೆ ಥಳಿತ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 17:12 IST
Last Updated 11 ಸೆಪ್ಟೆಂಬರ್ 2025, 17:12 IST
 ಅರೆಬೆತ್ತಲೆ ಸ್ಥಿತಿಯಲ್ಲಿದ್ದ ಬಸ್ ಚಾಲಕನನ್ನು ಪೊಲೀಸರು ಕರೆದೊಯ್ದರು. 
 ಅರೆಬೆತ್ತಲೆ ಸ್ಥಿತಿಯಲ್ಲಿದ್ದ ಬಸ್ ಚಾಲಕನನ್ನು ಪೊಲೀಸರು ಕರೆದೊಯ್ದರು.    

ಬೆಂಗಳೂರು: ಖಾಸಗಿ ಬಸ್​ನಲ್ಲಿ ಹೈದರಾಬಾದ್​​ನಿಂದ ಬೆಂಗಳೂರಿಗೆ ಬರುತ್ತಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಚಾಲಕನನ್ನು ಥಳಿಸಿರುವ ಘಟನೆ ನಗರದಲ್ಲಿ ಗುರುವಾರ ನಡೆದಿದೆ.

ಬಾಲಕಿಯ ಕುಟುಂಬಸ್ಥರು ಚಾಲಕ ಆರೀಫ್ ಅವರ ಬಟ್ಟೆ ಬಿಚ್ಚಿ ಅರೆನಗ್ನಗೊಳಿಸಿ ಹಲ್ಲೆ ನಡೆಸಿದ್ದಾರೆ.

ಬಾಲಕಿಯ ಕುಟುಂಬಸ್ಥರು ನೀಡಿದ‌ ದೂರು ಆಧರಿಸಿ ಹಲಸೂರು ಗೇಟ್‌ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ADVERTISEMENT

‘ಹೈದರಾಬಾದ್​ನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್​ನಲ್ಲಿ ಬಾಲಕಿಯ ಮೊಬೈಲ್ ಬ್ಯಾಟರಿ ಖಾಲಿಯಾಗಿದ್ದು, ಚಾರ್ಜ್ ಹಾಕಿಕೊಳ್ಳಲು ಚಾಲಕನಿಗೆ ಮೊಬೈಲ್ ನೀಡಿದ್ದಳು. ಚಾರ್ಜ್ ಆದ ಬಳಿಕ ಮೊಬೈಲ್ ಕೇಳಲು ಹೋದಾಗ ಮುತ್ತು ಕೊಟ್ಟರೆ ಮೊಬೈಲ್ ವಾಪಸ್ ನೀಡುತ್ತೇನೆ ಎಂದಿದ್ದಾನೆ. ಹೆಚ್ಚುವರಿ ಚಾಲಕನಾಗಿದ್ದ ಆರೋಪಿಯು ಬಸ್​​ನಲ್ಲಿ ಕುಳಿತಿರುವಾಗಲೂ ಲೈಂಗಿಕ ಕಿರುಕುಳ ನೀಡಿದ್ದಾನೆ’ ಎಂದು ಬಾಲಕಿಯ ಸಹೋದರ ಆರೋಪಿಸಿದ್ದಾರೆ.

‘ಬಸ್​ನಲ್ಲಿ ಇಬ್ಬರು ಚಾಲಕರಿದ್ದರು. ಒಬ್ಬ ಚಾಲಕ ಒಳ್ಳೆಯವ. ಆತ ಮಲಗಿದ ಬಳಿಕ ಎರಡನೇ ಚಾಲಕ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಬಾಲಕಿ ತಿಳಿಸಿದ್ದಾಳೆ’ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಲೈಂಗಿಕ ಕಿರುಕುಳದ ಬಗ್ಗೆ ಬಾಲಕಿ‌ಯು ಕರೆ ಮಾಡಿ‌ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಳು. ಗುರುವಾರ ಬೆಳಿಗ್ಗೆ ಚಾಲುಕ್ಯ ಸರ್ಕಲ್ ಬಳಿ ಬರುತ್ತಿದ್ದಂತೆ ಬಸ್ ತಡೆದು ಚಾಲಕನನ್ನು ಹೊರಗೆಳೆದಿದ್ದಾರೆ. ಬಳಿಕ ಆತನನ್ನು ಅರೆಬೆತ್ತಲು ಮಾಡಿ ಥಳಿಸಿದ್ದಾರೆ.‌

ಈ ವೇಳೆ ಸ್ಥಳೀಯರು ಜಮಾಯಿಸಿದ್ದರು. ಬಳಿಕ ಪೊಲೀಸರು, ಆರೋಪಿಯನ್ನು ಆಟೊದಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.