ADVERTISEMENT

ಅನಧಿಕೃತ ಕೇಬಲ್: ತಿಂಗಳ ಗಡುವು

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 23:01 IST
Last Updated 3 ಆಗಸ್ಟ್ 2021, 23:01 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ನಗರದ ‍ಪಾದಚಾರಿ ಮಾರ್ಗ ಮತ್ತು ಬೀದಿಗಳಲ್ಲಿ ತೂಗಾಡುತ್ತಿರುವ ಎಲ್ಲ ಅನಧಿಕೃತ ಕೇಬಲ್‌ಗಳನ್ನು ತೆರವುಗೊಳಿಸಲು ಕೇಬಲ್ ಟಿ.ವಿ ಆಪರೇಟರ್‌ ಮತ್ತು ಇಂಟರ್‌ನೆಟ್ ಪೂರೈಕೆದಾರ ಕಂಪನಿಗಳಿಗೆ ಒಂದು ತಿಂಗಳ ಗಡುವಿನ ನೋಟಿಸ್ ನೀಡುವಂತೆ ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ವಕೀಲ ಎನ್‌.ಪಿ.ಅಮೃತೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಅನಧಿಕೃತ ಕೇಬಲ್ ತೆರವು ಕಾರ್ಯಾಚರಣೆ ಮುಂದುವರಿಸುವಂತೆ ತಿಳಿಸಿತು.

ಟಿ.ವಿ ಕೇಬಲ್ ಆಪರೇಟರ್‌ಗಳ ಸಂಘ, ವಿವಿಧ ಟೆಲಿಕಾಂ, ಇಂಟರ್‌ನೆಟ್ ಸೇವೆ ಪೂರೈಕೆದಾರ ಕಂಪನಿಗಳನ್ನು ಪ್ರತಿವಾದಿಯಾಗಿ ಸೇರಿಸಿಕೊಳ್ಳಲು ಅನುಮತಿ ಕೋರಿ ಮಧ್ಯಂತರ ಅರ್ಜಿಯನ್ನು(ಐ.ಎ) ಅಮೃತೇಶ್ ಸಲ್ಲಿಸಿದ್ದರು. ತಿದ್ದುಪಡಿ ಮಾಡಿದ ಅರ್ಜಿಯನ್ನು ಎರಡು ವಾರಗಳಲ್ಲಿ ಸಲ್ಲಿಸಲು ಪೀಠ ಅನುಮತಿ ನೀಡಿತು. ಪ್ರತಿವಾದಿಗಳಿಗೆ ನೋಟಿಸ್ ನೀಡಲು ಆದೇಶಿಸಿತು.

ADVERTISEMENT

‘ಅನಧಿಕೃತವಾಗಿ ಕೇಬಲ್‌ಗಳನ್ನು ತೂಗುಬಿಟ್ಟಿರುವವರು ತೆರವುಗೊಳಿಸಲು ಒಂದು ತಿಂಗಳ ಕಾಲಾವಕಾಶ ನೀಡಬಹುದು. ನೋಟಿಸ್ ನೀಡಿದ ಒಂದು ತಿಂಗಳ ಬಳಿಕ ಎಲ್ಲವನ್ನೂ ತೆಗೆದು ಹಾಕಲು ಕಾರ್ಯಚರಣೆ ತೀವ್ರಗೊಳಿಸಬೇಕು’ ಎಂದು ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.