ADVERTISEMENT

ಧಗಧಗಿಸಿದ ಕಾರು: ಚಾಲಕ ‌‌ ಪಾರು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 19:39 IST
Last Updated 1 ಮಾರ್ಚ್ 2020, 19:39 IST
ಸುಟ್ಟು ಕರಕಲಾದ ಕಾರು
ಸುಟ್ಟು ಕರಕಲಾದ ಕಾರು   

ಬೆಂಗಳೂರು: ಮೆಜೆಸ್ಟಿಕ್‌ನಲ್ಲಿ ‘ನಮ್ಮ ಮೆಟ್ರೊ’ ನಿಲ್ದಾಣದ ಪಶ್ಚಿಮ ದಿಕ್ಕಿನ ಪ್ರವೇಶದ್ವಾರ ಬಳಿ ಮಾರುತಿ ಕಾರೊಂದು ಏಕಾಏಕಿ ಬೆಂಕಿಗಾಹುತಿಯಾದ ಘಟನೆ ಭಾನುವಾರ ಬೆಳಿಗ್ಗೆ 5.30ರ ಸುಮಾರಿಗೆ ನಡೆಯಿತು. ಘಟನೆ ವೇಳೆ ಚಾಲಕ ಅದೃಷ್ಟವಶಾತ್‌ ಅಪಾಯದಿಂದ ಪಾರಾದರು.

ಚಲಿಸುತ್ತಿದ್ದ ಕಾರಿನಲ್ಲಿ ಹಿಂಭಾಗದಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿತ್ತು. ತಕ್ಷಣ ಚಾಲಕ ಮಂಜು ಅವರು ಕಾರು ನಿಲ್ಲಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಬೆಂಕಿಯ ಜ್ವಾಲೆ ಹಬ್ಬಿದೆ. ಬಾಟಲಿ ನೀರು ಸುರಿದು ಬೆಂಕಿ ಆರಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಸ್ಥಳಕ್ಕೆ ಬಂದ ವಾಯು ವಜ್ರ ಬಸ್ಸಿನ ಚಾಲಕರೊಬ್ಬರು ತಮ್ಮ ಬಸ್ಸಿನಲ್ಲಿದ್ದ ಅಗ್ನಿಶಾಮಕ ಸಿಲಿಂಡರ್‌ನಿಂದ ಬೆಂಕಿ ನಂದಿಸಲು ಯತ್ನಿಸಿದರು. ಅಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ಕಾರನ್ನು ಆವರಿಸಿಕೊಂಡಿತ್ತು. ಅಗ್ನಿಶಾಮಕ ವಾಹನ ಸ್ಥಳಕ್ಕೆ ತಲುಪುವಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಕರಗಲಾಯಿತು.

‘ಜಯನಗರದ ರಾಘವೆಂದ್ರಸ್ವಾಮಿ ಮಠದ ಬಳಿಯ ನಿವಾಸಿ ಶ್ರೀನಿವಾಸ ಅವರಿಗೆ ಈ ಕಾರು ಸೇರಿದೆ. ಮಾಲೀಕರ ಕುಟುಂಬಸ್ಥರೊಬ್ಬರನ್ನು ಬಿಟ್ಟು ಮರಳುತ್ತಿದ್ದಾಗ ಕಾರಿನ ಒಳಗೆ ಹೊಗೆ ಕಾಣಿಸಿಕೊಂಡಿತು. ಬೆಂಕಿ ನಂದಿಸಲು ಪ್ರಯತ್ನಿಸಿದೆ. ಆದರೆ ಆಗಲಿಲ್ಲ' ಎಂದು ಮಂಜು 'ಪ್ರಜಾವಾಣಿಗೆ ತಿಳಿಸಿದರು.

ADVERTISEMENT

'ಕೆಲವೇ ನಿಮಿಷಗಳಲ್ಲೇ ಕಾರು ಸುಟ್ಟು ಕರಕಲಾಯಿತು. ಹೊಗೆ ಕಾಣಿಸಿಕೊಡ ತಕ್ಷಣವೇ ಚಾಲಕ ಹೊರಕ್ಕೆ ಬಂದುದರಿಂದ ಅವರ ಜೀವಕ್ಕೆ ಅಪಾಯ ಆಗಲಿಲ್ಲ' ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.