ಬೆಂಗಳೂರು: ಚಾಲುಕ್ಯ ವೃತ್ತದ ಬಳಿ ಎದುರಿನಿಂದ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪೋಲೊ ಕಾರು ಚಾಲಕ ಮದ್ಯ ಸೇವಿಸಿದ್ದ ಎಂಬ ಸಂಗತಿ ವಿಚಾರಣೆ ವೇಳೆ ಬಯಲಾಗಿದೆ.
ಈ ಸಂಬಂಧ ರಾಜಾಜಿನಗರದ ಎರಡನೇ ಹಂತದ ನಿವಾಸಿ, ಪಾನಮತ್ತನಾಗಿದ್ದ ಪೋಲೊ ಕಾರು ಚಾಲಕ ಆರ್.ಕೆ. ಮೂರ್ತಿ (21) ಮತ್ತು ಮಹೀಂದ್ರಾ ಕಾರು ಚಾಲಕ ಬಿಟಿಎಂ ಲೇಔಟ್ನ ಗುರುರಾಘವೇಂದ್ರ ಬಡಾವಣೆ ನಿವಾಸಿ ರಾಹುಲ್ ರೆಡ್ಡಿ (19) ಎಂಬವರನ್ನು ಬಂಧಿಸಿರುವ ಹೈಗ್ರೌಂಡ್ಸ್ ಸಂಚಾರ ಠಾಣೆ ಪೊಲೀಸರು, ಎರಡೂ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಮಾ. 10ರಂದು ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಹೋಳಿ ಹಬ್ಬ ಆಚರಿಸಿದ್ದರು. ನಂತರ ಸಂಜೆ 6 ಗಂಟೆಗೆ ಕಾರಿನಲ್ಲಿ ವಾಪಸು ಚಾಲುಕ್ಯ ವೃತ್ತವಾಗಿ ಹೋಗುತ್ತಿದ್ದರು. ಕೆಪಿಸಿ ಬಸ್ ನಿಲ್ದಾಣದ ಬಳಿ ಪೋಲೊ ಕಾರು ಚಾಲಕ, ಎದುರಿನಿಂದ ಹೋಗುತ್ತಿದ್ದ ಮಹೀಂದ್ರಾ ಕಾರಿಗೆ ಡಿಕ್ಕಿ ಹೊಡೆದಿದ್ದ. ಈ ವಿಷಯಕ್ಕೆ ಸಂಬಂಧಿಸಿ ಎರಡೂ ಕಾರುಗಳಲ್ಲಿದ್ದ 8-10 ಯುವಕರು ಪರಸ್ಪರ ಗಲಾಟೆ ಮಾಡಿಕೊಳ್ಳುತ್ತಿದ್ದರು. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.
ಕಾರು ಚಾಲಕರನ್ನು ವಶಕ್ಕೆ ಪಡೆದು ತಪಾಸಣೆಗೆ ನಡೆಸಿದಾಗ ಆರ್.ಕೆ. ಮೂರ್ತಿ ಮದ್ಯ ಸೇವಿಸಿರುವುದು ಗೊತ್ತಾಗಿದೆ. ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದೆ ಘಟನೆಗೆ ಕಾರಣ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.