ಬೆಂಗಳೂರು: ಆಭರಣ ಮಳಿಗೆಯೊಂದಕ್ಕೆ ಗ್ರಾಹಕರ ಸೋಗಿನಲ್ಲಿ ಹೋಗಿದ್ದ ಕಳ್ಳನೊಬ್ಬ ₹ 75 ಲಕ್ಷ ಮೌಲ್ಯದ ವಜ್ರದ ಆಭರಣ ಕದ್ದೊಯ್ದಿದ್ದು, ಈ ಸಂಬಂಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಆಭರಣ ಖರೀದಿ ಮಾಡುವುದಾಗಿ ಹೇಳಿದ್ದ ಅಪರಿಚಿತ, ಸಿಬ್ಬಂದಿ ಗಮನ ಬೇರೆಡೆ ಸೆಳೆದು ವಜ್ರದ ಉಂಗುರ ಕದ್ದೊಯ್ದಿದ್ದಾನೆ. ಈ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಳಿಗೆ ವ್ಯವಸ್ಥಾಪಕ ನೀಡಿರುವ ದೂರು ಆಧರಿಸಿ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಗ್ರಾಹಕರು ಹೆಚ್ಚಿರುವ ಸಮಯದಲ್ಲಿ ಮಳಿಗೆಗೆ ಹೋಗಿದ್ದ ಆರೋಪಿ, ವಜ್ರದ ಉಂಗುರ ತೋರಿಸುವಂತೆ ಹೇಳಿದ್ದ. ಸಿಬ್ಬಂದಿ ವಜ್ರದ ಉಂಗುರಗಳನ್ನು ಟೇಬಲ್ ಮೇಲೆ ಇರಿಸಿದ್ದರು. ಇದೇ ಸಂದರ್ಭದಲ್ಲಿ ಅವರ ಗಮನ ಬೇರೆಡೆ ಸೆಳೆದಿದ್ದ ಆರೋಪಿ, ಅಸಲಿ ಉಂಗುರವನ್ನು ಕದ್ದು ಜೇಬಿನಲ್ಲಿಟ್ಟುಕೊಂಡಿದ್ದ. ನಕಲಿ ವಜ್ರದ ಉಂಗುರವನ್ನು ಟೇಬಲ್ ಮೇಲೆ ಇರಿಸಿದ್ದ.’
‘ವಿನ್ಯಾಸ ಸರಿ ಇಲ್ಲವೆಂದು ಹೇಳಿ ಆರೋಪಿ ಸ್ಥಳದಿಂದ ಹೊರಟು ಹೋಗಿದ್ದ. ಕೆಲ ನಿಮಿಷಗಳ ನಂತರ ಉಂಗುರ ಪರಿಶೀಲನೆ ನಡೆಸಿದಾಗ, ನಕಲಿ ಎಂಬುದು ಗೊತ್ತಾಗಿದೆ. ಬಳಿಕವೇ ವ್ಯವಸ್ಥಾಪಕ ದೂರು ನೀಡಿದ್ದಾರೆ. ಆರೋಪಿ ಯಾರು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ’ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.