ಬೆಂಗಳೂರು: ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ನಡೆಸುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಜಾತಿಗಳಾಗಿ ವಿಂಗಡಣೆ ಮಾಡುವ ಬದಲು ಏಳು ವರ್ಗಗಳಾಗಿ ವಿಂಗಡಿಸುವುದು ಸೂಕ್ತ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ತಿಳಿಸಿದೆ.
ಆಕ್ಷೇಪಣೆಗಳ ಜತೆಗೆ ಸಲಹೆಗಳನ್ನು ಒಳಗೊಂಡ ಮನವಿ ಪತ್ರವನ್ನು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಸ್.ರಘುನಾಥ್ ಅವರು ಆಯೋಗಕ್ಕೆ ನೀಡಿದ್ದಾರೆ. ಅತಿ ಮುಂದುವರಿದ, ಮಧ್ಯಮ ಮುಂದುವರಿದ, ಮುಂದುವರಿಯುತ್ತಿರುವ, ಮಧ್ಯಮ ಹಿಂದುಳಿದ, ಹಿಂದುಳಿದ ಹಾಗೂ ಹಿಂದುಳಿದ ವರ್ಗಗಳಿಂದ ಕೆಳಗಿರುವ ವರ್ಗಗಳಾಗಿ ವಿಂಗಡಿಸಬಹುದು ಎಂದು ತಿಳಿಸಿದ್ದಾರೆ.
ಮಹಾಸಭಾದ ಬೇಡಿಕೆಗಳು ಏನು?
* ಮೀಸಲಾತಿ ಸೌಲಭ್ಯ ಬಳಸಿಕೊಂಡು ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿ ಹೊಂದಿರುವ ಹಿಂದುಳಿದ ವರ್ಗದವರನ್ನು ಸೌಲಭ್ಯದಿಂದ ಹೊರಗೆ ಇಡಬೇಕು.
* ಆಯೋಗವು ಸಮೀಕ್ಷೆಗೆ ಪರ್ಯಾಯ ಪದ್ದತಿಗಳನ್ನು ರೂಪಿಸಿಕೊಂಡು ಹಿಂದುಳಿತ ಜಾತಿ ಇಲ್ಲವೇ ಮುಂದುವರಿದ ಜಾತಿ ಎಂದು ಪರಿಗಣಿಸುವುದು ಸೂಕ್ತ.
* ಬ್ರಾಹ್ಮಣ ಸಮುದಾಯದಲ್ಲೂ ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರು ಇದ್ದಾರೆ. ಅವರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲು ನೀಡುವ ನಿಟ್ಟಿನಲ್ಲಿ ಯೋಚಿಸಬೇಕು.
* ಸಮುದಾಯದ 62 ಉಪಪಂಗಡಗಳನ್ನು ಬ್ರಾಹ್ಮಣ ಎಂದೇ ಪರಿಗಣಿಸಬೇಕು.
* ಆಯೋಗವು ಬ್ರಾಹ್ಮಣ ಮುಸ್ಲಿಂ, ಬ್ರಾಹ್ಮಣ ಕ್ರಿಶ್ಚಿಯನ್, ವೈಶ್ಯ ಬ್ರಾಹ್ಮಣ ಎನ್ನುವ ಪಟ್ಟಿ ನೀಡಿದ್ದು, ಇದನ್ನು ತೆಗೆದು ಹಾಕಬೇಕು. ಯಾವುದೇ ವ್ಯಕ್ತಿ ಬ್ರಾಹ್ಮಣ ಇಲ್ಲವೇ ಕ್ರಿಶ್ಚಿಯನ್ ಆಗಿರಬಹುದು. ಎರಡೂ ಆಗಿರಲು ಸಾಧ್ಯವಿಲ್ಲ.
ಬ್ರಾಹ್ಮಣರನ್ನು ಮುಂದುವರಿದವರು ಎಂದು ಪರಿಗಣಿಸುವ ನಿರ್ಧಾರವನ್ನು ಹಿಂದುಳಿದ ವರ್ಗಗಳ ಆಯೋಗ ಮಾಡಿದ್ದರೆ ಸಮುದಾಯವನ್ನು ಸಮೀಕ್ಷೆಯಿಂದ ದೂರ ಇಡುವುದು ಸೂಕ್ತಎಸ್.ರಘುನಾಥ್ ಅಧ್ಯಕ್ಷ ಬ್ರಾಹ್ಮಣ ಮಹಾಸಭಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.