ಹೆಸರಘಟ್ಟ: ತೋಟಗೆರೆ ಬಸವಣ್ಣ ದೇವಸ್ಥಾನದ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ದನಗಳ ಜಾತ್ರೆ ಆರಂಭವಾಗಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ದೇಶಿಯ ತಳಿಯಾದ ಹಳ್ಳಿಕಾರ್, ಸಿಂಧಿ ಸೇರಿದಂತೆ ಇನ್ನಿತರ ರಾಸುಗಳು ಬಂದಿವೆ. ರೈತರು ತಮ್ಮ ರಾಸುಗಳನ್ನು ಸಿಂಗರಿಸಿ, ಮೆರವಣಿಗೆ ಮಾಡಿ ಮಾರಾಟಕ್ಕೆ ಸಿದ್ಧಪಡಿಸಿದ್ದಾರೆ. ಕಾಲಿಗೆ ಗೆಜ್ಜೆ, ಕೊರಳಿಗೆ ಗಂಟೆ, ದಂಡೆ, ಕೊಂಬಿಗೆ ಕಳಸ ಹೀಗೆ ಬಗೆ ಬಗೆಯ ಬಣ್ಣಗಳಿಂದ, ಹೂಗಳಿಂದ ರಾಸುಗಳನ್ನು ಅಲಂಕರಿಸಿ ಮೆರೆಗು ತಂದಿದ್ದಾರೆ.
ಜಾತ್ರೆಯಲ್ಲಿ ಅಲ್ಲಲ್ಲಿ ರಾಸುಗಳನ್ನು ಕೊಂಡುಕೊಳ್ಳುವ ರೈತರು ಬಾಯಿ ವ್ಯಾಪಾರ ಮಾಡುತ್ತಿದ್ದರು. ಕೆಲವು ದಲ್ಲಾಳಿಗಳು ಹಳೆಯ ಸಂಪ್ರದಾಯದಂತೆ ಬಟ್ಟೆ ಕೆಳಗೆ ಕೈ ಬೆರಳುಗಳನ್ನು ಸೂಚಿಸಿ, ಕೊಡುವವರ ಮತ್ತು ಕೊಂಡುಕೊಳ್ಳುವವರ ಮಧ್ಯೆ ಸಂಧಿ ವ್ಯಾಪಾರ ಮಾಡುತ್ತಿದ್ದುದು ಕಂಡುಬಂದಿತು.
ಕಳೆದ ವರ್ಷ 170ರಿಂದ 180 ಜೋಡಿ ರಾಸುಗಳು ಜಾತ್ರೆಗೆ ಬಂದಿದ್ದವು. ಈ ಬಾರಿ 110 ಜೋಡಿ ರಾಸುಗಳು ಬಂದಿವೆ. ಹೋರಿಗಳನ್ನು ಸಾಕಲು ಹೆಚ್ಚು ವೆಚ್ಚವಾಗುವುದರಿಂದ ರೈತರು ನಿರಾಸಕ್ತಿ ತೋರುತ್ತಿದ್ದಾರೆ ಎಂದು ಹಾರೋವಳ್ಳಿ ಗ್ರಾಮದ ರೈತ ಹನುಮಂತರಾಜು ತಿಳಿಸಿದರು.
ಜಾತ್ರೆಯಲ್ಲಿ ₹40 ಸಾವಿರದಿಂದ ₹6 ಲಕ್ಷದವರೆಗಿನ ಬೆಲೆಯ ರಾಸುಗಳು ಇವೆ. ಕಡಿಮೆ ಬೆಲೆಯ ರಾಸುಗಳು ಮಾರಾಟವಾಗುತ್ತಿದ್ದರೂ, ಹೆಚ್ಚು ಬೆಲೆಯ ರಾಸುಗಳನ್ನು ಕೊಂಡುಕೊಳ್ಳುವಂತಹ ಗಿರಾಕಿಗಳು ಈ ಬಾರಿ ಜಾತ್ರೆಗೆ ಬಂದಿಲ್ಲ ಎಂದು ರೈತ ಹೊನ್ನಪ್ಪ ಹೇಳಿದರು.
ಜಾತ್ರೆಯಲ್ಲಿ ರಾಸುಗಳಿಗೆ ಅಗತ್ಯವಾದ ಹಗ್ಗ, ಮೂಗುದಾರ, ದಂಡೆ, ಬಾರುಕೋಲು, ಕಣ್ಣಿ, ಮಕಾಡೆ, ಗೆಜ್ಜೆ, ಗಂಟೆ, ಶಂಖಗಳ ಮಳಿಗೆಗಳು ಆಕರ್ಷಿಸುತ್ತಿವೆ.
ಜಾತ್ರೆಯಲ್ಲಿ ಭಾಗವಹಿಸಿರುವ ಎಲ್ಲ ಜಾನುವಾರಗಳ ಮಾಲೀಕರಿಗೆ, ಹಿತ ಚಿಂತನ ಚಾರಿಟಬಲ್ ಟ್ರಸ್ಟ್ ವತಿಯಿಂದ ಬಹುಮಾನ ವಿತರಿಸಲಾಗುತ್ತದೆ ಎಂದು ಟ್ರಸ್ಟಿ ವಿ. ರಾಮಸ್ವಾಮಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.