ಬೆಂಗಳೂರು: ನಗರಕ್ಕೆ ನೀರು ಪೂರೈಸುವ ಕಾವೇರಿ ನದಿಗೆ ಗೌರವ ಸಲ್ಲಿಸಲು ಹಾಗೂ ಜಲಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ, ಜಲಮಂಡಳಿ ಮತ್ತು ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ನಗರದಲ್ಲಿ ‘ಕಾವೇರಿ ಆರತಿ’ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್ಪ್ರಸಾತ್ ಮನೋಹರ್ ತಿಳಿಸಿದರು.
ಮಾರ್ಚ್ 21ರ ಸಂಜೆ 6 ಗಂಟೆಗೆ ಸದಾಶಿವನನಗರದಲ್ಲಿರುವ ಸ್ಯಾಂಕಿ ಕೆರೆಯಲ್ಲಿ ‘ಕಾವೇರಿ ಆರತಿ’ ಆಯೋಜಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ‘ವಿಶ್ವ ಜಲ ಪ್ರತಿಜ್ಞೆ’ ಸ್ವೀಕಾರ ಅಭಿಯಾನಕ್ಕೂ ಚಾಲನೆ ನೀಡಲಾಗುವುದು ಅವರು ತಿಳಿಸಿದರು.
ಸ್ಯಾಂಕಿ ಕೆರೆ ಆವರಣದಲ್ಲಿ ಸೋಮವಾರ ಕಾವೇರಿ ಆರತಿ’ ಕಾರ್ಯಕ್ರಮದ ಸಿದ್ದತೆಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ‘ಇದು ಕೇವಲ ಒಂದು ಕಾರ್ಯಕ್ರಮವಲ್ಲ. ಜಲ ಸಂರಕ್ಷಣೆ, ಸುಸ್ಥಿರ ನೀರು ನಿರ್ವಹಣಾ ಪದ್ದತಿಗಳ ಅಳವಡಿಕೆ, ಸಂಸ್ಕರಿಸಿದ ನೀರಿನ ಮರು ಬಳಕೆ, ಅಂತರ್ಜಲ ಮರುಪೂರಣ ಹಾಗೂ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿಕೊಳ್ಳುವ ಕುರಿತು ಜನಜಾಗೃತಿ ಮೂಡಿಸುವ ಅಭಿಯಾನವಾಗಿದೆ ಎಂದು ವಿವರಿಸಿದರು.
ಬೆಂಗಳೂರು ಜಲಮಂಡಳಿ 60 ವರ್ಷಗಳು ಪೂರೈಸಿರುವ ಹಿನ್ನಲೆಯಲ್ಲಿ ಆಯೋಜಿಸಿರುವ ವಜ್ರಮಹೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ಇದೊಂದು ವಿನೂತನ ಕಾರ್ಯಕ್ರಮವಾಗಿದೆ. ಜನರ ಧಾರ್ಮಿಕ ಭಾವನೆಗೆ ಒತ್ತು ನೀಡುತ್ತಾ, ಆ ಮೂಲಕ ಜಲಜಾಗೃತಿ ಮೂಡಿಸುವುದು ಕಾರ್ಯಕ್ರಮ ಉದ್ದೇಶವಾಗಿದೆ ಎಂದು ತಿಳಿಸಿದರು.
’ಕಾವೇರಿ ಆರತಿ’ ಪ್ರಯುಕ್ತ ಕೊಡಗು ಜಿಲ್ಲೆ ಭಾಗಮಂಡಲದಿಂದ ಕಲಶಗಳ ಮೂಲಕ ಕಾವೇರಿ ನೀರನ್ನು ತಂದು ಸ್ಯಾಂಕಿ ಕೆರೆ ಆವರಣದಲ್ಲಿಟ್ಟು ಪೂಜೆ ಸಲ್ಲಿಸಲಾಗುತ್ತದೆ. ಅಂದು ಸಂಜೆ 6 ಗಂಟೆ ಬಳಿಕ ಕಾವೇರಿ ಆರತಿ ಹಮ್ಮಿಕೊಳ್ಳಲಾಗುವುದು. ನಂತರ ಜಲ ಜಾಗೃತಿಯ ಸಂದೇಶಗಳನ್ನು ಸಾರಲಾಗುವುದು ಎಂದು ಅವರು ವಿವರಿಸಿದರು.
* ಕಾವೇರಿ ನದಿಗೆ ನಮನ ಸಲ್ಲಿಸುವ ಕಾರ್ಯಕ್ರಮ
* ಜಲ ಸಂರಕ್ಷಣೆಯ ವಿವಿಧ ಹಂತಗಳ ಕುರಿತು ಜಾಗೃತಿ ಅಭಿಯಾನ
* ಬೆಂಗಳೂರಿನಲ್ಲಿ ಇದೇ ಮೊದಲ ಬಾರಿ ಈ ಕಾರ್ಯಕ್ರಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.