ADVERTISEMENT

ಕಮಿಷನರ್ ಹೆಸರಲ್ಲೇ ವಂಚನೆ!

ನಟ ದರ್ಶನ್ ಸಂಬಂಧಿಯೆಂದು ಹೇಳುತ್ತಿದ್ದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 20:55 IST
Last Updated 31 ಜುಲೈ 2020, 20:55 IST

ಬೆಂಗಳೂರು: ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಸೇರಿ ಹಲವು ರಾಜಕಾರಣಿಗಳು ಹಾಗೂ ಸಿನಿಮಾ ನಟರ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಆರೋಪದಡಿ ಶ್ರೀನಿವಾಸ್ ಅಲಿಯಾಸ್ ಕಿರಣ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಮಂಡ್ಯ ಜಿಲ್ಲೆಯ ಮಳವಳ್ಳಿಯ ಶ್ರೀನಿವಾಸ್, ಸಿನಿಮಾ ಸಹ ಕಲಾವಿದ ನೆಂದು ಹೇಳಿಕೊಂಡಿದ್ದಾನೆ. ‘ಕೆಜಿಎಫ್’‌ ಹಾಗೂ ‘ಅವನೇ ಶ್ರೀಮನ್‌ ನಾರಾಯಣ’ ಸಿನಿಮಾಗಳಲ್ಲಿ ನಟಿಸಿರು ವುದಾಗಿ ತಿಳಿಸಿದ್ದಾನೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಯುವ ಉದ್ಯಮಿಗಳಿಬ್ಬರು ನಗರದಲ್ಲಿ ಕಂಪನಿಯೊಂದನ್ನು ನಡೆಸು ತ್ತಿದ್ದರು. ತಾವು ಪಡೆದ ಸಾಲದ ವಿಚಾರವಾಗಿ ಅವರಿಬ್ಬರಿಗೆ ಸಮಸ್ಯೆ ಉಂಟಾಗಿತ್ತು. ಅವರನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿ, ‘ನಾನು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರ ಕಾರ್ಯದರ್ಶಿ. ನಿಮಗೆ ಸಹಾಯ ಮಾಡುತ್ತೇನೆ. ಸಾಲಗಾರರಿಗೆ ನಾನೇ ಪಾಠ ಕಲಿಸುತ್ತೇನೆ’ ಎಂದಿದ್ದ. ನಂತರ, ಕಂಪನಿಗೆ ಸಂಬಂಧಪಟ್ಟ ದಾಖಲೆಗಳನ್ನೆಲ್ಲ ತರಿಸಿಕೊಂಡು ತನ್ನ ಬಳಿ ಇಟ್ಟುಕೊಂಡಿದ್ದ. ಕೆಲ ದಿನಗಳ ನಂತರ ಸಾಲಗಾರರನ್ನು ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದ್ದ. ಹಣ ಕೇಳಿದರೆ ಜೈಲಿಗೆ ಕಳುಹಿಸುವುದಾಗಿಯೂ ಬೆದರಿಸಲಾರಂಭಿಸಿದ್ದ’ ಎಂದೂ ಪೊಲೀಸರು ಹೇಳಿದರು.

ADVERTISEMENT

‘ನೊಂದ ಸಾಲಗಾರರು ಕಮಿಷನರ್ ಕಚೇರಿಗೆ ದೂರು ನೀಡಿದ್ದರು. ಸದಾಶಿವನಗರ ಠಾಣೆಯಲ್ಲೂ ಪ್ರಕರಣ ದಾಖಲಿಸಿದ್ದರು. ತನಿಖೆ ಕೈಗೆತ್ತಿಕೊಂಡಿದ್ದ ಸಿಸಿಬಿಯ ವಿಶೇಷ ತಂಡ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದೆ’ ಎಂದೂ ತಿಳಿಸಿದರು.

ಅವಕಾಶದ ಹೆಸರಿನಲ್ಲೂ ವಂಚನೆ; ತನಗೆ ಸಿನಿಮಾ ನಟರು, ನಿರ್ದೇಶಕರು ಹಾಗೂ ನಿರ್ಮಾಪಕರು ಗೊತ್ತು ಎಂದು ಹೇಳುತ್ತಿದ್ದ ಆರೋಪಿ, ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಯುವತಿಯರಿಗೂ ವಂಚಿಸಿದ್ದು ಸಿಸಿಬಿ ತನಿಖೆಯಿಂದ ಗೊತ್ತಾಗಿದೆ.

‘ಆರೋಪಿಯ ಮೊಬೈಲ್‌ನಲ್ಲಿ ನೂರಕ್ಕೂ ಹೆಚ್ಚು ಯುವತಿಯರ ಫೋಟೊಗಳು ಸಿಕ್ಕಿವೆ. ನಟ ದರ್ಶನ್ ಸಂಬಂಧಿ ಎಂದು ಹೇಳಿಯೂ ವಂಚಿಸಿದ್ದಾನೆ’ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.