ಬೆಂಗಳೂರು: ‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯನ್ನೇ ನಾಶಪಡಿಸುವ ಹುನ್ನಾರ ನಡೆಸುತ್ತಿದೆ’ ಎಂದು ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯದ ವ್ಯವಸ್ಥಾಪಕ ಟ್ರಸ್ಟಿ ಮತ್ತು ಹಿರಿಯ ವಕೀಲ ರವಿವರ್ಮ ಕುಮಾರ್ ಆತಂಕ ವ್ಯಕ್ತಪಡಿಸಿದರು.
ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯದಿಂದ ಶನಿವಾರ ನಗರದಲ್ಲಿ ಆಯೋಜಿಸಿದ್ದ ‘ತುರ್ತು ಪರಿಸ್ಥಿತಿ ನೆನಪಿನಲ್ಲಿ ಸಂವಿಧಾನ ಅವಲೋಕನ’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
‘ರಾಷ್ಟ್ರದಲ್ಲಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುತ್ತಿದೆ. ತುರ್ತು ಪರಿಸ್ಥಿತಿಗಿಂತಲೂ ಈಗಿನ ಕಾಲ ಭೀಕರವಾಗಿದೆ. ಬಿಜೆಪಿ ಇತಿಹಾಸವನ್ನೇ ಬಿಡುಮೇಲು ಮಾಡುತ್ತಿದೆ. ಮುಂದಿನ ರಾಷ್ಟ್ರಪತಿ ಅಭ್ಯರ್ಥಿಯನ್ನು ರಬ್ಬರ್ ಸ್ಟ್ಯಾಂಪ್
ಮಾಡಿಕೊಳ್ಳಲು ಆಯ್ಕೆ ಮಾಡಿಕೊಂಡಂತೆ ಕಾಣಿಸುತ್ತಿದೆ’ ಎಂದರು.
ಚಿಂತಕ ಪ.ಮಲ್ಲೇಶ್ ಮಾತನಾಡಿ, ‘ಇಷ್ಟು ದಿವಸ ಜನರ ತಲೆಗೆ ಕೈಹಾಕಿದ್ದ ಮೋದಿ, ಜಿಎಸ್ಟಿ ಜಾರಿಗೊಳಿಸಿ ಜನರ ಜೇಬಿಗೂ ಕೈಹಾಕಿದ್ದಾರೆ. ಬಿಜೆಪಿ ಆಡಳಿತದಿಂದ ಇಡೀ ದೇಶದಲ್ಲಿ ತಲ್ಲಣದ ವಾತಾವರಣ ಇದೆ. ಪಠ್ಯಪುಸ್ತಕ ಪರಿಷ್ಕರಣೆಯ ನೆಪದಲ್ಲಿ ಎಳೆಯ ಮಕ್ಕಳ ಮೇಲೆ ಹಿಂದುತ್ವದ ಹೇರುವ ಹುನ್ನಾರ ನಡೆಯುತ್ತಿದೆ’ ಎಂದು ದೂರಿದರು.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ದಾಸ್ ಮಾತನಾಡಿದರು. ಚಾಮರಾಜನಗರ ಅಮೃತಭೂಮಿ ಇಂಟರ್ನ್ಯಾಷನಲ್ ಸೆಂಟರ್ನ ನಿರ್ದೇಶಕಿ ಚುಕ್ಕಿ ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.