ಬೆಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದ ಮಹಿಳೆಯ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಆರೋಪಿ ಕೇಶವ್ ಎಂಬಾತನನ್ನು ಆಟೊ ಚಾಲಕ ರುದ್ರೇಶ್ ಎಂಬುವರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
‘ಸರಗಳವು ಮಾಡುತ್ತಿದ್ದ ಆರೋಪದಡಿ ಕೇಶವ್ನನ್ನು ಬಂಧಿಸಲಾಗಿದೆ. ಆತನಿಂದ ₹ 40 ಸಾವಿರ ಮೌಲ್ಯದ ಚಿನ್ನದ ಸರ ಜಪ್ತಿ ಮಾಡಲಾಗಿದೆ. ಆರೋಪಿಯನ್ನು ಹಿಡಿದುಕೊಂಡ ಚಾಲಕ ರುದ್ರೇಶ್ ಅವರಿಗೆ ಇಲಾಖೆಯಿಂದ ಬಹುಮಾನ ನೀಡಲಾಗುವುದು’ ಎಂದು ಸೋಲದೇವನಹಳ್ಳಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಚಿಕ್ಕಬಾಣಾವರದ ನಿವಾಸಿ ಪುಷ್ಪಾ (32), ಒಂದು ವರ್ಷದ ಮಗುವನ್ನು ಎತ್ತಿಕೊಂಡು ಮೇಡರಹಳ್ಳಿಯಲ್ಲಿರುವ ದೇವಸ್ಥಾನಕ್ಕೆ ಶುಕ್ರವಾರ (ಅ. 8) ಸಂಜೆ ಹೋಗಿದ್ದರು. ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದರು. ಇದೇ ಸಂದರ್ಭದಲ್ಲೇ ಅವರನ್ನು ಹಿಂಬಾಲಿಸಿದ್ದ ಆರೋಪಿ, ಚಿನ್ನದ ಸರ ಕಿತ್ತುಕೊಂಡು ಓಡಿದ್ದ. ಸರ ಕಿತ್ತುಕೊಳ್ಳುವ ವೇಳೆ ಆರೋಪಿ, ಪುಷ್ಪಾ ಅವರನ್ನು ಮಗುವಿನ ಸಮೇತ ತಳ್ಳಿದ್ದ. ಇಬ್ಬರಿಗೂ ಗಾಯವಾಗಿದೆ’ ಎಂದೂ ತಿಳಿಸಿದರು.
‘ಸಹಾಯಕ್ಕಾಗಿ ಪುಷ್ಪಾ ಅವರು ಕೂಗಾಡಿದ್ದರು. ಮನೆಗಳಿಗೆ ಅಡುಗೆ ಅನಿಲ ಸಿಲಿಂಡರ್ ಪೂರೈಸಲು ಬಂದಿದ್ದ ಆಟೊ ಚಾಲಕ ರುದ್ರೇಶ್, ಆರೋಪಿಯನ್ನು 2 ಕಿ.ಮೀ ಬೆನ್ನಟ್ಟಿದ್ದರು. ಮಾರ್ಗಮಧ್ಯೆಯೇ ರುದ್ರೇಶ್ ಮೇಲೆ ಆರೋಪಿ ಬಡಿಗೆಯಿಂದ ಹಲ್ಲೆ ಮಾಡಿದ್ದ. ಅದಕ್ಕೆ ಅಂಜದ ರುದ್ರೇಶ್, ಆರೋಪಿಯನ್ನು ಹಿಡಿದುಕೊಂಡು ಠಾಣೆಗೆ ಮಾಹಿತಿ ನೀಡಿದ್ದ. ಸ್ಥಳಕ್ಕೆ ಹೋದ ಪಿಎಸ್ಐ ಹಾಗೂ ಸಿಬ್ಬಂದಿ, ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದರು’ ಎಂದೂ ಹೇಳಿದರು.
ನರ್ಸೀಂಗ್ ಹೋಮ್ನಲ್ಲಿದ್ದ ಕೆಲಸ ಬಿಟ್ಟಿದ್ದ: ‘ಪಿಯುಸಿ ವ್ಯಾಸಂಗ ಮಾಡಿದ್ದ ಆರೋಪಿ ಕೇಶವ್, ನಗರದ ನರ್ಸಿಂಗ್ ಹೋಮ್ವೊಂದರಲ್ಲಿ ಕೆಲಸ ಮಾಡುತ್ತಿದ್ದ. ತಿಂಗಳ ಹಿಂದಷ್ಟೇ ಕೆಲಸ ಬಿಟ್ಟಿದ್ದ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
‘ಬೇರೆ ಕಡೆ ಕೆಲಸ ಸಿಕ್ಕಿರಲಿಲ್ಲ. ಆರ್ಥಿಕ ತೊಂದರೆಗೆ ಸಿಲುಕಿದ್ದ ಆರೋಪಿಗೆ ನಿತ್ಯದ ಖರ್ಚಿಗೂ ಹಣವಿರಲಿಲ್ಲ. ಅಕ್ರಮವಾಗಿ ಹಣ ಗಳಿಸಲು ಯೋಚಿಸಿದ್ದ ಆತ, ಸರಗಳವು ಮಾಡಲು ಮುಂದಾಗಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.