ADVERTISEMENT

ಪತ್ನಿಯ ಸರ ಕದ್ದೊಯ್ಯುತ್ತಿದ್ದವನ ಬೆನ್ನಟ್ಟಿ ಹಿಡಿದ !

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2018, 19:58 IST
Last Updated 29 ಅಕ್ಟೋಬರ್ 2018, 19:58 IST

ಬೆಂಗಳೂರು: ಚಾಮರಾಜಪೇಟೆಯ ನಿವಾಸಿ ರಮ್ಯ ಎಂಬುವರ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದ ಕಳ್ಳನನ್ನು, ಅವರ ಪತಿ ಭರತ್‌ ಎಂಬುವರೇ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿ ತಮಿಳುನಾಡಿನ ಮಣಿಕಂಠ ಎಂಬಾತನನ್ನು ವಶಕ್ಕೆ ಪಡೆದಿರುವ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ. ಆತ, ಕೂಲಿ ಕಾರ್ಮಿಕ ಎಂದು ಗೊತ್ತಾಗಿದೆ.

‘ಚಾಮರಾಜಪೇಟೆಯ 2ನೇ ಮುಖ್ಯರಸ್ತೆಯಲ್ಲಿರುವ ಮನೆಯ ಮೊದಲ ಮಹಡಿಯಲ್ಲಿ ಭರತ್‌ ಹಾಗೂ ರಮ್ಯ ದಂಪತಿ ನೆಲೆಸಿದ್ದಾರೆ. ನೆಲಮಹಡಿಯಲ್ಲಿ ಭರತ್‌ ಅವರ ತಂದೆ- ತಾಯಿ ಇದ್ದಾರೆ. ಭಾನುವಾರ ರಾತ್ರಿ ಭರತ್, ಪೋಷಕರ ಮನೆಗೆ ಹೋಗಿದ್ದರು. ಅದೇ ವೇಳೆ ರಮ್ಯ, ಮನೆಯ ಬಾಗಿಲು ಹಾಕಿಕೊಳ್ಳದೆ ಮಲಗಿದ್ದರು’ ಎಂದು ಪೊಲೀಸರು ವಿವರಿಸಿದರು.

ADVERTISEMENT

‘ಏಕಾಏಕಿ ಮನೆಗೆ ನುಗ್ಗಿದ ಆರೋಪಿ, ಮಹಿಳೆಯ ಚಿನ್ನದ ಸರ ಕಿತ್ತುಕೊಂಡಿದ್ದ. ಎಚ್ಚರಗೊಂಡ ರಮ್ಯ, ಚೀರಾಡಲಾರಂಭಿಸಿದ್ದರು. ಅದನ್ನು ಕೇಳಿಸಿಕೊಂಡ ಭರತ್, ಮನೆಯತ್ತ ಹೊರಟಿದ್ದಾಗಲೇ ಮಣಿಕಂಠ ಓಡಿಹೋಗುತ್ತಿರುವುದನ್ನು ನೋಡಿದ್ದರು. ನಂತರ, ಆತನನ್ನು ಬೆನ್ನಟ್ಟಿ ಸ್ಥಳೀಯರ ಸಹಾಯದಿಂದ ಹಿಡಿದರು’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.