ADVERTISEMENT

ನೆಲವಾಸಿಗಳಿಗೆ ಸಿಗದ ಮುಖ್ಯಮಂತ್ರಿ ಪರಿಹಾರ ನಿಧಿ: ಮಲೆನಾಡು–ಕರಾವಳಿ ಜನಪರ ಒಕ್ಕೂಟ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2024, 15:58 IST
Last Updated 18 ನವೆಂಬರ್ 2024, 15:58 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ

   

ಬೆಂಗಳೂರು: ಮುಖ್ಯಮಂತ್ರಿ ಪರಿಹಾರ ನಿಧಿಗೆ ಕರಾವಳಿ–ಮಲೆನಾಡು ಭಾಗದ ನೆಲವಾಸಿಗಳು ಸಲ್ಲಿಸುವ ಅರ್ಜಿಗಳು ತಿರಸ್ಕೃತವಾಗುತ್ತಿವೆ. ಬಡವರಿಗೆ ಸಹಾಯ ಸಿಗುತ್ತಿಲ್ಲ ಎಂದು ಮಲೆನಾಡು–ಕರಾವಳಿ ಜನಪರ ಒಕ್ಕೂಟ ಆರೋಪಿಸಿದೆ.

‘ಹಳ್ಳಿಗಾಡು ಪ್ರದೇಶಗಳಲ್ಲಿ ಆರೋಗ್ಯ ಸಮಸ್ಯೆಯಾದಾಗ ಜನರು ಸ್ಥಳೀಯ ಆಸ್ಪತ್ರೆಗೆ ಹೋಗುತ್ತಾರೆ. ಅಲ್ಲಿ ಎರಡು ದಿನಗಳ ಬಳಿಕ ಚಿಕಿತ್ಸೆ ಸಿಗುವುದಿಲ್ಲ. ಬೇರೆ ಆಸ್ಪತ್ರೆಗೆಳಿಗೆ ಹೋಗಿ ಎಂದು ಕಳುಹಿಸುತ್ತಾರೆ. ಅಷ್ಟು ಹೊತ್ತಿಗೆ ಅಲ್ಲಿಯೇ ₹ 5000ದಿಂದ ₹ 10,000 ಬಿಲ್‌ ಆಗಿರುತ್ತದೆ. ಅದು ಆಯುಷ್ಮಾನ್‌ನಂಥ ಯೋಜನೆಗಳಿಂದ ಸ್ವಲ್ಪ ಜಮಾ ಆಗುತ್ತದೆ. ಆನಂತರ ಹೆಚ್ಚಿನ ಚಿಕಿತ್ಸೆಗೆ ನಗರದ ಆಸ್ಪತ್ರೆಗಳಿಗೆ ಹೋದಾಗ ಬಿಲ್‌ ಲಕ್ಷ ರೂಪಾಯಿ ದಾಟಿರುತ್ತದೆ’ ಎಂದು ಮಲೆನಾಡು–ಕರಾವಳಿ ಜನಪರ ಒಕ್ಕೂಟದ ಪ್ರಧಾನ ಸಂಚಾಲಕ ಅನಿಲ್ ಹೊಸಕೊಪ್ಪ ತಿಳಿಸಿದ್ದಾರೆ.

ADVERTISEMENT

‘ಹೇಗೋ ಹಣ ಹೊಂದಿಸಿಕೊಂಡು ಆಸ್ಪತ್ರೆಯ ಬಿಲ್‌ ಕಟ್ಟಿದ ಬಳಿಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ಅರ್ಜಿ ನೀಡಿದರೆ ನಿಮಗೆ ಈಗಾಗಲೇ ಆಯುಷ್ಮಾನ್‌ ಅಥವಾ ಬಿಪಿಎಲ್‌ ಸೌಲಭ್ಯದಿಂದ ₹ 5000 ಜಮಾ ಆಗಿದೆ. ಹಾಗಾಗಿ ಮತ್ತೆ ಪರಿಹಾರ ನಿಧಿಯಿಂದ ನೆರವು ಕೊಡಲು ಬರುವುದಿಲ್ಲ ಎಂದು ಅಧಿಕಾರಿಗಳು ಅರ್ಜಿಯನ್ನು ತಿರಸ್ಕರಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೈದ್ಯಕೀಯ ಪರಿಹಾರ ನಿಧಿಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂದು ಅಮಾಯಕರಿಗೆ ಗೊತ್ತಿರುವುದಿಲ್ಲ. ಹಾಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವೈದ್ಯಕೀಯ ವೆಚ್ಚವನ್ನು ಭರಿಸಬೇಕು. ಆಯುಷ್ಮಾನ್‌ ಅಥವಾ ಬಿಪಿಎಲ್‌ ಸೌಲಭ್ಯದಿಂದ ಜಮಾ ಆಗಿರುವ ಹಣವನ್ನು ಕಡಿತ ಮಾಡಿ ಉಳಿದ ಮೊತ್ತ ನೀಡಬೇಕು. ಇದರಿಂದ ಬಡವರಿಗೆ ಸಹಾಯವಾಗಲಿದೆ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.