ADVERTISEMENT

ಪಂಚಲೋಹದ ವಿಗ್ರಹ ಕದ್ದಿದ್ದವನ ಬಂಧನ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 16:54 IST
Last Updated 14 ಡಿಸೆಂಬರ್ 2020, 16:54 IST

ಬೆಂಗಳೂರು: ಚಿಕ್ಕಜಾಲ ಠಾಣೆ ವ್ಯಾಪ್ತಿಯ ಹುಣಸಮಾರನಹಳ್ಳಿಯ ಚಂದ್ರಮೌಳೇಶ್ವರ ಮಠದಲ್ಲಿದ್ದ 150 ವರ್ಷ ಹಳೆಯದಾದ ಪಂಚಲೋಹದ ವಿಗ್ರಹ ಕಳ್ಳತನ ಮಾಡಿದ್ದ ಆರೋಪದಡಿ ರಘು ಅಲಿಯಾಸ್ ಸೈಕೊ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ರಾಜಾನುಕುಂಟೆ ಬಳಿಯ ಶ್ರೀರಾಮನಹಳ್ಳಿ ನಿವಾಸಿ ರಘು, ಅಪರಾಧ ಹಿನ್ನೆಲೆಯುಳ್ಳವ. ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿ, ಜಾಮೀನು ಮೇಲೆ ಹೊರಬಂದಿದ್ದ. ಪುನಃ ಅಪರಾಧ ಕೃತ್ಯದಲ್ಲಿ ಭಾಗಿಯಾಗಲಾರಂಭಿಸಿದ್ದ ಎಂದು ಪೊಲೀಸ್‌ ಮೂಲಗಳು ಹೇಳಿವೆ.

‘ಮಠದ ಗರ್ಭಗುಡಿಯಲ್ಲಿ ರೇಣುಕಾಚಾರ್ಯರ ಪಂಚಲೋಹದ ವಿಗ್ರಹವಿತ್ತು. ಆಗಾಗ ಮಠಕ್ಕೆ ಭೇಟಿ ನೀಡುತ್ತಿದ್ದ ಆರೋಪಿ, ವಿಗ್ರಹ ನೋಡಿದ್ದ. ನ. 25ರಂದು ಹೆಲ್ಮೆಟ್ ಧರಿಸಿ ಮಠಕ್ಕೆ ಬಂದಿದ್ದ ಆರೋಪಿ, ಗರ್ಭಗುಡಿಯಲ್ಲಿ ಯಾರೂ ಇಲ್ಲದಿದ್ದಾಗ ನಮಸ್ಕರಿಸುವ ನೆಪ ಮಾಡಿ ಒಳಗೆ ಹೋಗಿದ್ದ. ಅಲ್ಲಿದ್ದ ಪಂಚಲೋಹದ ವಿಗ್ರಹವನ್ನು ಕದ್ದು ಪಂಚೆಯಲ್ಲಿ ಸುತ್ತಿಕೊಂಡು ಪರಾರಿಯಾಗಿದ್ದ.’

ADVERTISEMENT

‘ವಿಗ್ರಹ ಕಳುವಾದ ಬಗ್ಗೆ ಮಠದ ಸ್ವಾಮೀಜಿ ದೂರು ನೀಡಿದ್ದರು. ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.