ADVERTISEMENT

4 ವರ್ಷದ ಮಗು 60 ವರ್ಷದ ವ್ಯಕ್ತಿಗೆ ಆಸರೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 19:02 IST
Last Updated 11 ಅಕ್ಟೋಬರ್ 2019, 19:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮಿದುಳು ನಿಷ್ಕ್ರಿಯವಾಗಿದ್ದ 4ವರ್ಷದ ಮಗುವೊಂದು ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ 60 ವರ್ಷದ ವೃದ್ಧರೊಬ್ಬರಿಗೆ ಆಸರೆಯಾಗಿದೆ.

ಅಪಸ್ಮಾರ ರೋಗದಿಂದ ಬಳಲುತ್ತಿದ್ದ ನಾಲ್ಕು ವರ್ಷದ ಮಗು ಆ್ಯಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದ ಕಾರಣ ಮಗು ಬದುಕುಳಿಯಲು ಸಾಧ್ಯವಿಲ್ಲ ಎಂದು ವೈದ್ಯರು ಖಚಿತಪಡಿಸಿದರು. ಅಷ್ಟೇ ಅಲ್ಲ, ಅಂಗಾಂಗ ದಾನದ ಬಗ್ಗೆ ಕುಟುಂಬದ ಸದಸ್ಯರಿಗೆ ಮನವರಿಕೆ ಮಾಡಿದರು. ಇದರಿಂದಾಗಿ ಮಗುವಿನ ಅಂಗಾಂಗಗಳನ್ನು ದಾನ ಮಾಡಲು ಕುಟುಂಬದ ಸದಸ್ಯರು ಸಮ್ಮತಿ ಸೂಚಿಸಿದರು.

ಅದೇ ಮೂತ್ರಪಿಂಡ ಸಮಸ್ಯೆಯಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ 60 ವರ್ಷದ ವ್ಯಕ್ತಿಯೊಬ್ಬರಿಗೆ ಎರಡು ಮೂತ್ರಪಿಂಡಗಳನ್ನು ಎನ್-ಬ್ಲಾಕ್ ಕಿಡ್ನಿ ಕಸಿ (ಇಬಿಕೆಟಿ) ವಿಧಾನವನ್ನು ಬಳಸಿ ಕಸಿ ಮಾಡಲಾಗಿದೆ.

ADVERTISEMENT

ಈ ಕುರಿತು ಮಾಹಿತಿ ನೀಡಿದ ಆಸ್ಪತ್ರೆಯ ವೈದ್ಯ ಡಾ.ಗೋವರ್ಧನ್ ರೆಡ್ಡಿ, ‘ದಾನಿಯ ಅಂಗದ ಗಾತ್ರ ಮತ್ತು ಸ್ವೀಕರಿಸುವವನ ದೇಹದ ಗಾತ್ರದಲ್ಲಿ ವ್ಯತ್ಯಾಸವಾದರೆ ಚಿಕಿತ್ಸೆ ಸವಾಲಾಗುತ್ತದೆ. ಇಂತಹ ಸಮಯದಲ್ಲಿ ರಕ್ತ ಹೆಪ್ಪುಗಟ್ಟುವಲ್ಲಿ ಸಮಸ್ಯೆಯಾಗುತ್ತದೆ. ಹೆಪ್ಪುಗಟ್ಟುವಿಕೆ ತಡೆಯಲು ನಿರಂತರವಾಗಿ ರೋಗಿಗೆ ರಕ್ತದ್ರಾವಕ ನೀಡಲಾಯಿತು. ವಯಸ್ಕ ರೋಗಿಗೆ ಕೇವಲ ಒಂದು ಮೂತ್ರಪಿಂಡ ಕಸಿ ಮಾಡಿದರೆ ಸಾಲುವುದಿಲ್ಲ. ಆದ್ದರಿಂದ ಎರಡೂ ಮೂತ್ರಪಿಂಡ ಕಸಿ ಮಾಡಬೇಕಾಯಿತು’ ಎಂದು ವಿವರಿಸಿದರು.

‘ಮಗುವಿನ ಕುಟುಂಬ ಸದಸ್ಯರ ನಿರ್ಧಾರಕ್ಕಾಗಿ ಕೃತಜ್ಞನಾಗಿದ್ದೇನೆ. ಕಸಿಯಿಂದಾಗಿ ವ್ಯಕ್ತಿಯು ಡಯಾಲಿಸಿಸ್ ಅಗತ್ಯವಿಲ್ಲದೆ ಆರೋಗ್ಯಯುತ ಜೀವನ ನಡೆಸಬಹುದು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.