
ಬೆಂಗಳೂರು: ಕನ್ನಡದ ಸಾಂಸ್ಕೃತಿಕ ಸಂಪತ್ತು ವಚನಗಳ ಮೂಲಕ ಮಕ್ಕಳಲ್ಲಿ ಸಂಸ್ಕೃತಿಯ ಬಿತ್ತನೆ ಮಾಡುತ್ತಿರುವ ಮಕ್ಕಳ ವಚನ ಮೇಳವು ಸಂಸ್ಕೃತಿಯ ಉತ್ಸವ ಎಂದು ಉದ್ಯಮಿ ಎಸ್. ಷಡಕ್ಷರಿ ಹೇಳಿದರು.
ವಚನಜ್ಯೋತಿ ಬಳಗವು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಮಕ್ಕಳ ವಚನ ಮೇಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಸ್ಪರ್ಧಾತ್ಮಕ ಜಗತ್ತಿನಲ್ಲಿ ಮೂಲೆ ಗುಂಪಾಗುತ್ತಿರುವ ಕನ್ನಡದ ಉಳಿವಿಗೆ ವಚನ ಮೇಳಗಳು ಅಗತ್ಯ’ ಎಂದರು.
ಕನ್ನಡ ಸಂಸ್ಕೃತಿ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್ ಮಾತನಾಡಿ, ‘ಇಲ್ಲಿ ಸೇರಿರುವ ಅಪಾರಸ್ತೋಮ ವಚನಪ್ರೀತಿಗೆ ಸಾಕ್ಷಿಯಾಗಿದೆ. ಬಸವಣ್ಣನವರ ಆದರ್ಶಗಳನ್ನು ಮಕ್ಕಳಿಗೆ ಮುಟ್ಟಿಸುವ ಕೆಲಸವನ್ನು ಅತ್ಯಂತ ಸಮರ್ಪಕವಾಗಿ ಮಾಡುತ್ತಿರುವ ವಚನಜ್ಯೋತಿ ಬಳಗದ ಕಾರ್ಯ ಅನುಕರಣೀಯ’ ಎಂದು ಪ್ರಶಂಸಿದರು.
ನಗರಾಭಿವೃದ್ದಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ನಾಗೇಂದ್ರ ಹೊನ್ನಳ್ಳಿ ಮಾತನಾಡಿ, ‘ಮಕ್ಕಳನ್ನು ಮೊಬೈಲು ಗೀಳಿನಿಂದ ಹೊರತರಲು ಮಕ್ಕಳ ವಚನ ಮೇಳಗಳು ಹೆಚ್ಚೆಚ್ಚು ನಡೆಯಬೇಕು’ ಎಂದರು.
‘ಏಳು ದಿನ, ನಾಲ್ಕು ವೇದಿಕೆಗಳಲ್ಲಿ 12 ಪ್ರಕಾರಗಳಲ್ಲಿ ನಡೆದ ಮಕ್ಕಳ ವಚನ ಮೇಳದಲ್ಲಿ 150ಕ್ಕೂ ಹೆಚ್ಚು ಶಾಲೆಗಳ ನಾಲ್ಕು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು’ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ತಿಳಿಸಿದರು.
ಬೇಲಿಮಠದ ಶಿವರುದ್ರಸ್ವಾಮೀಜಿ, ವಿಶ್ವಬಂಧು ಫೌಂಡೇಷನ್ನ ಸಿದ್ದಯ್ಯ ಗುರೂಜಿ, ದೊಡ್ಡಮರಳವಾಡಿಯ ಶಿವಮಠದ ಪ್ರಭು ಕಿರೀಟ ಸ್ವಾಮೀಜಿ, ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಬಸವ ಸಮಿತಿಯ ಉಪಾಧ್ಯಕ್ಷ ಪ್ರಭುದೇವ ಚಿಗಟೇರಿ, ಉದ್ಯಮಿ ಬಸವನಗೌಡ, ವೀರಲೋಕದ ವೀರಕಪುತ್ರ ಶ್ರೀನಿವಾಸ್, ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪಾರ್ಶ್ವನಾಥ್, ವಚನಜ್ಯೋತಿ ಬಳಗದ ರಾಜಾ ಗುರುಪ್ರಸಾದ್, ಪ್ರಭು ಇಸುವನಹಳ್ಳಿ, ಮೀನಾಕ್ಷಿ ಮೇಟಿ, ಜಾನಕಿ, ಮಧು, ಶಿವಪ್ರಕಾಶ್, ಗಂಗಾಧರ್, ಡಾ. ರುದ್ರೇಶ ಅದರಂಗಿ, ವಿಶಾಲ್, ಸುರೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.