ADVERTISEMENT

ವಿಷಯ ವೈವಿಧ್ಯದಿಂದ ಕೂಡಿದ ಕೃತಿ ಯಾವ ಜನ್ಮದ ಮೈತ್ರಿ; ಎಚ್‌.ಎಸ್‌.ಶಿವಪ್ರಕಾಶ್‌

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 15:26 IST
Last Updated 19 ಅಕ್ಟೋಬರ್ 2021, 15:26 IST
ಕಾರ್ಯಕ್ರಮದಲ್ಲಿ ಚಿರಂಜೀವಿ ಸಿಂಗ್‌ ಅವರನ್ನು ಗೌರವಿಸಲಾಯಿತು (ನಿಂತವರು;ಎಡದಿಂದ) ಅಜಯ್‌ಕುಮಾರ್ ಸಿಂಗ್‌, ಸಾಹಿತಿ ಹಂ.ಪ.ನಾಗರಾಜಯ್ಯ, ಎಚ್.ಎಸ್.ಶಿವಪ್ರಕಾಶ್, ನಿವೃತ್ತ ಐಎಎಸ್‌ ಅಧಿಕಾರಿ ಐ.ಎಂ.ವಿಠ್ಠಲಮೂರ್ತಿ, ಸುಗತ ಶ್ರೀನಿವಾಸರಾಜು ಹಾಗೂ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಇದ್ದರು -ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಚಿರಂಜೀವಿ ಸಿಂಗ್‌ ಅವರನ್ನು ಗೌರವಿಸಲಾಯಿತು (ನಿಂತವರು;ಎಡದಿಂದ) ಅಜಯ್‌ಕುಮಾರ್ ಸಿಂಗ್‌, ಸಾಹಿತಿ ಹಂ.ಪ.ನಾಗರಾಜಯ್ಯ, ಎಚ್.ಎಸ್.ಶಿವಪ್ರಕಾಶ್, ನಿವೃತ್ತ ಐಎಎಸ್‌ ಅಧಿಕಾರಿ ಐ.ಎಂ.ವಿಠ್ಠಲಮೂರ್ತಿ, ಸುಗತ ಶ್ರೀನಿವಾಸರಾಜು ಹಾಗೂ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಇದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಚಿರಂಜೀವಿ ಸಿಂಘ್‌ ಅವರ ಕೃತಿಯು ವಿಷಯ ವೈವಿಧ್ಯದಿಂದ ಕೂಡಿದೆ. ಪ್ರವಾಸೋದ್ಯಮ, ಹಸಿವು, ಪ್ರಕೃತಿ ಹೀಗೆ ಹಲವು ವಿಷಯಗಳ ಉಲ್ಲೇಖ ಇದರಲ್ಲಿದೆ. ಸಂವೇದನೆ ಹಾಗೂ ಸಂಬದ್ಧತೆಯೂ ಪುಸ್ತಕದಲ್ಲಿದೆ’ ಎಂದು ಕವಿ ಎಚ್‌.ಎಸ್‌.ಶಿವಪ್ರಕಾಶ್‌ ತಿಳಿಸಿದರು.

ನವಕರ್ನಾಟಕ ಪುಸ್ತಕ ಪ್ರಕಾಶನವು 60 ವಸಂತಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಸಾಹಿತಿ–ಕಲಾವಿದರ ಬಳಗದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ನಿವೃತ್ತ ಐಎಎಸ್‌ ಅಧಿಕಾರಿ ಚಿರಂಜೀವಿ ಸಿಂಗ್‌ ಅವರ ‘ಯಾವ ಜನ್ಮದ ಮೈತ್ರಿ?’ ಕೃತಿ ಕುರಿತಾದ ಸಂವಾದ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.

‘ಈ ಕೃತಿಯನ್ನು ಓದಿದಾಗ ನಮ್ರತೆಯ ಭಾವ ಮೂಡುತ್ತದೆ. ಇದು ಆತ್ಮಚರಿತ್ರೆಯ ವಿವಿಧ ಖಂಡಗಳಂತೆ ಭಾಸವಾಗುತ್ತದೆ. ಅಖಂಡ ಪ್ರಜ್ಞೆ ಮತ್ತು ಲೋಕ ಕಾರುಣ್ಯವೂ ಪುಸ್ತಕದಲ್ಲಿ ಅಡಕವಾಗಿದೆ. ಲೇಖಕರು ವಿಶೇಷವಲ್ಲದ ವಸ್ತುಗಳಲ್ಲೂ ವಿಶೇಷತೆ ಕಾಣುವ ಪ್ರಯತ್ನ ಮಾಡಿದ್ದಾರೆ’ ಎಂದರು.

ADVERTISEMENT

ಪತ್ರಕರ್ತಸುಗತ ಶ್ರೀನಿವಾಸರಾಜು, ‘ಚಿರಂಜೀವಿ ಅವರ ಬರವಣಿಗೆ ತೊರೆಯ ಅನುಭವ ನೀಡುತ್ತಿತ್ತು. ಅವರ ಮಾತುಗಳಲ್ಲಿನ ಮೃದುತ್ವ ಬರಹದಲ್ಲೂ ಕಾಣಸಿಗುತ್ತದೆ. ಚಿರಂಜೀವಿ ಅವರಿಗೆ ಎಲ್ಲವನ್ನೂ ಅಪ್ಪಿಕೊಳ್ಳುವ ಮನೋಭಾವವಿದೆ. ಇದು ಅವರ ಬರಹದ ಗುಣವೂ ಆಗಿದೆ. ಲೇಖಕರಿಗೆ ಯಾವುದೂ ಅಮುಖ್ಯವಲ್ಲ. ಎಲ್ಲವೂ ಮುಖ್ಯವೇ ಆಗಿದೆ. ಅವರ ವಿಚಾರಗಳಲ್ಲಿ ಸೌಂದರ್ಯ, ವಿಜ್ಞಾನ ಹಾಗೂ ಆಧ್ಯಾತ್ಮಿಕ ದೃಷ್ಟಿಕೋನವೂ ಅಡಕವಾಗಿದೆ’ ಎಂದರು.

ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಅಜಯ್‌ಕುಮಾರ್‌ ಸಿಂಗ್‌, ‘ಚಿರಂಜೀವಿ ಅವರು ಪಂಜಾಬ್‌ ರಾಜ್ಯದವರಾದರೂ ಕನ್ನಡವನ್ನು ಕಲಿತು ಕನ್ನಡಿಗರಿಗೇ ಮಾದರಿಯಾಗಿದ್ದಾರೆ. ನಿಷ್ಠುರ ಅಧಿಕಾರಿಯಾಗಿದ್ದ ಅವರು ಪ್ರಾಮಾಣಿಕ ಬದುಕು ಕಟ್ಟಿಕೊಂಡಿದ್ದಾರೆ. ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುವ ಅವರ ಗುಣ ತುಂಬಾ ಹಿಡಿಸುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.