ಬೆಂಗಳೂರು: ‘ಚಿಟ್ ಫಂಡ್ ಪ್ರವರ್ತಕರು ನೀಡುವ ಸೇವೆಗಳ ಮೇಲಿನ ಸರಕು ಸೇವಾ ತೆರಿಗೆಯನ್ನು (ಜಿಎಸ್ಟಿ) ಸಂಪೂರ್ಣವಾಗಿ ರದ್ದುಪಡಿಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ಚಿಟ್ಸ್ಟರ್ಸ್ ಒಕ್ಕೂಟದ ಸದಸ್ಯರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ರಾಜ್ಯದ ಎಲ್ಲ ಜಿಲ್ಲೆಗಳಿಂದ ಬಂದಿದ್ದ ಚಿಟ್ ಫಂಡ್ ಪ್ರವರ್ತಕರು ಹಾಗೂ ಉದ್ಯೋಗಿಗಳು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೇರಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಇದು ಸಾಂಕೇತಿಕ ಪ್ರತಿಭಟನೆ. ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಗಂಭೀರ ಸ್ವರೂಪದ ಹೋರಾಟ ನಡೆಸಲಾಗುವುದು’ ಎಂದು ಪ್ರತಿಭಟನಕಾರರು ಎಚ್ಚರಿಸಿದರು.
ಒಕ್ಕೂಟದ ಅಧ್ಯಕ್ಷ ಎಸ್. ಬಸವಲಿಂಗಪ್ಪ,‘ಚಿಟ್ ಮೇಲೆ ಇದುವರೆಗೂ ಶೇ 12ರಷ್ಟು ಜಿಎಸ್ಟಿ ವಿಧಿಸಲಾಗುತ್ತಿತ್ತು. ಇದನ್ನು ಹಿಂಪಡೆಯುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ಸ್ಪಂದಿಸಿಲ್ಲ. ಇದರ ನಡುವೆಯೇ ಜಿಎಸ್ಟಿ ದರವನ್ನು ದಿಢೀರ್ ಶೇ 18ಕ್ಕೆ ಏರಿಸಲಾಗಿದೆ. ಇದು, ಚಿಟ್ ವಂತಿಗೆದಾರರು ಹಾಗೂ ಚಿಟ್ ಸಂಸ್ಥೆಗಳ ಮುಖ್ಯಸ್ಥರಿಗೆ ಆಘಾತವನ್ನುಂಟು ಮಾಡಿದೆ’ ಎಂದು ತಿಳಿಸಿದರು.
ಒಕ್ಕೂಟದ ಖಜಾಂಚಿ ಟಿ.ಸಿ. ವಿಜಯಕುಮಾರ್,‘ರಾಜ್ಯದಲ್ಲಿ 1,750 ಚಿಂಟ್ ಫಂಡ್ ಪ್ರವರ್ತಕರಿದ್ದು, ಲಕ್ಷಾಂತರ ಮಂದಿ ಹೂಡಿಕೆದಾರರಿದ್ದಾರೆ. ಈ ಕ್ಷೇತ್ರವನ್ನೇ ನಂಬಿಕೊಂಡು 10 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಬದುಕು ಕಟ್ಟಿಕೊಂಡಿದ್ದಾರೆ. ಜಿಎಸ್ಟಿ ಹೆಚ್ಚಳ ಮಾಡಿರುವುದು, ಇವರೆಲ್ಲರ ಜೀವನದ ಮೇಲೆ ಬರೆ ಎಳೆದಂತಾಗಿದೆ’ ಎಂದು ದೂರಿದರು.
ಮುಖ್ಯಮಂತ್ರಿಗೆ ಮನವಿ ಸಲ್ಲಿಕೆ: ಪ್ರತಿಭಟನೆ ಬಳಿಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಜಿಎಸ್ಟಿ ಆಯುಕ್ತರ ಕಚೇರಿಗೆ ಪ್ರತಿಭಟನಕಾರರು ಮನವಿ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.