ADVERTISEMENT

ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ; ವಿವಿಧೆಡೆ ಸಿಐಟಿಯು ಪ್ರತಿಭಟನೆ

ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 17:04 IST
Last Updated 8 ಜೂನ್ 2021, 17:04 IST
ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ ವಿರೋಧಿಸಿ ಬಸವನಗುಡಿಯ ಜ್ಯೋತಿ ಬಸು ಭವನದ ಬಳಿ ಸಿಐಟಿಯು ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು– ಪ್ರಜಾವಾಣಿ ಚಿತ್ರ
ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ ವಿರೋಧಿಸಿ ಬಸವನಗುಡಿಯ ಜ್ಯೋತಿ ಬಸು ಭವನದ ಬಳಿ ಸಿಐಟಿಯು ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು– ಪ್ರಜಾವಾಣಿ ಚಿತ್ರ   

ಬೆಂಗಳೂರು: ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ ವಿರೋಧಿಸಿ ಸಿಐಟಿಯು ಕಾರ್ಯಕರ್ತರು ನಗರದ ವಿವಿಧೆಡೆ ಮಂಗಳವಾರ ಪ್ರತಿಭಟನೆ ನಡೆಸಿದರು.

ಅಖಿಲ ಭಾರತ ರಸ್ತೆ ಸಾರಿಗೆ ಕಾರ್ಮಿಕರ ಒಕ್ಕೂಟ ನೀಡಿದ್ದ ರಾಷ್ಟ್ರವ್ಯಾಪಿ ಪ್ರತಿಭಟನೆಯ ಕರೆಯ ಅಂಗವಾಗಿ ಈ ಚಳವಳಿ ಹಮ್ಮಿಕೊಳ್ಳಲಾಗಿತ್ತು. ಬಸವನಗುಡಿ, ಕುಮಾರಸ್ವಾಮಿ ಬಡಾವಣೆ, ಬನಶಂಕರಿ, ತ್ಯಾಗರಾಜನಗರ, ರಾಜಾಜಿನಗರ, ಉದಯನಗರ, ಕೆ.ಆರ್‌.ಪುರ, ಕೂಡ್ಲು ಗೇಟ್‌, ಯಶವಂತಪುರ, ಬಸವೇಶ್ವರನಗರ, ಕಮಲಾನಗರ, ಶ್ರೀರಾಂಪುರ, ಕಾವೇರಿನಗರ, ಹೆಗ್ಗನಹಳ್ಳಿ, ಎಂ.ಎಸ್‌. ಪಾಳ್ಯ, ಸಿ.ವಿ. ರಾಮನ್‌ ನಗರ ಸೇರಿದಂತೆ ಹಲವು ಸ್ಥಳಗಳಲ್ಲಿ ಸಿಐಟಿಯು ಸದಸ್ಯರು ಪ್ರತಿಭಟನೆ ನಡೆಸಿದರು.

ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನು ಕೋವಿಡ್‌ ಪೂರ್ವ ಸ್ಥಿತಿಗೆ ಹಿಂಪಡೆಯಬೇಕು, ಪೆಟ್ರೋಲಿಯಂ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ತಂದು, ರಾಜ್ಯಗಳ ಪಾಲನ್ನು ನೀಡಬೇಕು ಮತ್ತು ಆಡಳಿತಾತ್ಮಕ ಬೆಲೆ ನಿಯಂತ್ರಣ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಈ ಪ್ರತಿಭಟನೆ ನಡೆಸಲಾಯಿತು.

ADVERTISEMENT

ಬಸವನಗುಡಿಯಲ್ಲಿರುವ ಸಿಐಟಿಯು ಕಚೇರಿ ಜ್ಯೋತಿ ಬಸು ಭವನದ ಬಳಿ ನಡೆದ ಪ್ರತಿಭಟನೆಯಲ್ಲಿ ಸಿಐಟಿಯು ರಾಜ್ಯ ಸಮಿತಿ ಉಪಾಧ್ಯಕ್ಷ ಡಾ. ಪ್ರಕಾಶ್‌ ಕೆ., ಆಟೊ ರಿಕ್ಷಾ ಚಾಲಕರ ಯೂನಿಯನ್‌ ಮುಖಂಡರಾದ ಬಸವರಾಜು, ಎನ್‌. ಶ್ರೀನಿವಾಸ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಫೆಡರೇಷನ್‌ ಮುಖಂಡರಾದ ವೇಣುಗೋಪಾಲ್‌ ಆರ್‌., ಸಂತೋಷ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.